
ಹೆಬ್ರಿ : “ಮಕ್ಕಳ ಮನಸ್ಸು ಪಾಠಕ್ಕಿಂತಲೂ ಆಟದ ಕಡೆಗೆ ಹೆಚ್ಚು ಹಾತೊರೆಯುವಂತದ್ದು. ಆಟದ ನಂತರ ಪಾಠ ಇದ್ದಾಗ ಅವರ ಮೈ ಮನಸ್ಸು ತುಂಬಾ ಪ್ರಫುಲ್ಲಗೊಳ್ಳುತ್ತದೆ. ಕಲಿಕೆ ಸುಗಮವಾಗುತ್ತದೆ. ಜ್ಞಾನಕ್ಕಿಂತಲೂ ಮಿಗಿಲಾದದ್ದು ಯಾವುದು ಇಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಈಗಲೇ ಹೊಂದಿರಬೇಕು. ಮತ್ತು ಅದಕ್ಕೆ ಪೂರಕವಾಗಿ ಸಾಗಬೇಕು. ಕಠಿಣ ಪರಿಶ್ರಮದ ಫಲ ಸಿಹಿಯಾಗಿರುತ್ತದೆ” ಎಂದು ಕಾಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಸುನಿಲ್ ಕುಮಾರ್ ಶೆಟ್ಟಿ ಗುಮ್ಮಗುಂಡಿ ಬಲ್ಲಾಡಿ ಹೇಳಿದರು. ಅವರು ಎಂ.ಎನ್.ಡಿ.ಎಸ್.ಎಂ.ಅನುದಾನಿತ ಪ್ರೌಢಶಾಲೆ ಮುದ್ರಾಡಿಯಲ್ಲಿ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದರು.ಅವರು 1994-95ರ ಸಾಲಿನ ಹಿರಿಯ ವಿದ್ಯಾರ್ಥಿನಿ ಮತ್ತು 2001-02 ರ ಸಾಲಿನ ಹಿರಿಯ ವಿದ್ಯಾರ್ಥಿಗಳು ಒಟ್ಟಾಗಿ ಕೊಡಮಾಡಿದ ಕ್ರೀಡಾ ಸಮವಸ್ತ್ರದ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ (ರಿ) ನ ಕಾರ್ಯದರ್ಶಿ ಶ್ರೀ ಅಶೋಕ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಶಾಲೆಯ ಹಳೆ ವಿದ್ಯಾರ್ಥಿಗಳು ನೀಡಿದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಮಣಿಪಾಲ ಎಂ.ಐ.ಟಿ. ಯ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ರೂಪಶ್ರೀ , ಮುದ್ರಾಡಿ ಸಮೃದ್ಧಿಯ ಸುನೀಲ್ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರಶೇಖರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ಶ್ರೀ ಮಹೇಶ ನಾಯ್ಕ. ಕೆ. ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ರಘುಪತಿ ಹೆಬ್ಬಾರ್ ವಂದಿಸಿದರು. ಶಿಕ್ಷಕರಾದ ಶ್ರೀ ಆನಂದ ಪಿ. ವಿ. , ಶ್ರೀಮತಿ ಶ್ಯಾಮಲಾ ಕೊಠಾರಿ , ಶ್ರೀಮತಿ ಚಂದ್ರಕಾಂತಿ ಹೆಗ್ಡೆ ಹಾಗೂ ಶಿಕ್ಷಕೇತರ ಸಿಬ್ಬಂದಿ ಶ್ರೀ ಮಹೇಶ್ ಎಂ. ಸಹಕರಿಸಿದರು.