
ಬೆಂಗಳೂರು : ‘ಸಂಜು ವೆಡ್ಸ್ ಗೀತಾ 2’ ಚಿತ್ರದ ನಿರ್ದೇಶಕ ನಾಗಶೇಖರ್ ಅವರು ಈ ಚಿತ್ರದ ನಾಯಕಿ ರಚಿತಾ ರಾಮ್ ವಿರುದ್ಧ ಕನ್ನಡ ಚಲನಚಿತ್ರ ಕಲಾವಿದರ ಸಂಘ ಹಾಗೂ ಫಿಲ್ಮ್ ಚೇಂಬರ್ ಬಳಿ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
ಪ್ರಚಾರದಲ್ಲಿ ಭಾಗವಹಿಸದ ಕಾರಣಕ್ಕೆ ಆಕ್ರೋಶ
ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ಬಳಿಕ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ, ಚಿತ್ರತಂಡಕ್ಕೆ ಯಾವುದೇ ಬೆಂಬಲ ನೀಡದ ನಟಿಯ ನಡೆ ಚಿತ್ರತಂಡವನ್ನು ಅಸಮಾಧಾನಕ್ಕೆ ಗುರಿಮಾಡಿದೆ.ಸಿನಿಮಾ ಪ್ರಚಾರದಲ್ಲಿ ನಾಯಕಿಯ ಪಾತ್ರ ಮುಖ್ಯವಾದದ್ದು, ನಟಿಯ ನಿರ್ಲಕ್ಷ್ಯದಿಂದಾಗಿ ಕನ್ನಡ ಸಿನಿಮಾಗೆ ಥಿಯೇಟರ್ ಸಮಸ್ಯೆ ಕುರಿತು ತುಂಬಾ ನಷ್ಟ ಅನುಭವಿಸಿದ್ದೇವೆ ಎಂಬ ಆರೋಪವನ್ನು ನಿರ್ದೇಶಕರು ಮಾಡಿದ್ದಾರೆ.
“ಈ ಹಿಂದೆ ರಮ್ಯಾ ಹಾಗೂ ತಮನ್ನಾ ಜೊತೆ ಕೆಲಸ ಮಾಡಿದ್ದೇನೆ. ಆದರೆ ಈ ರೀತಿ ಯಾವ ನಟಿಯೂ ನಡೆದುಕೊಂಡಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂಥವರು ಈ ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ. ನಾವು ಅವರಿಗೆ ಸರಿಯಾದ ಸಂಭಾವನೆಯನ್ನು ಕೊಟ್ಟಿದ್ದೇವೆ. ರಚಿತಾ ರಾಮ್ ಅವರ ವರ್ತನೆ ತುಂಬಾ ನಿರಾಶೆ ಉಂಟುಮಾಡಿದೆ” ಎಂದು ನಾಗಶೇಖರ್ ವಿಷಾದ ವ್ಯಕ್ತಪಡಿಸಿದ್ದಾರೆ. ಚಿತ್ರ ನಿರ್ಮಾಪಕ ಛಲವಾದಿ ಕುಮಾರ್ ಹಾಗೂ ನಟ ಶ್ರೀನಗರ ಕಿಟ್ಟಿ ಸಹ ಈ ದೂರಿಗೆ ಸಹಿ ಹಾಕಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಜೋಡಿಯಲ್ಲಿ ಮೂಡಿಬಂದಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ರಾಗಿಣಿ ದ್ವಿವೇದಿ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.