
ಮೈಸೂರು: “ಮೈಸೂರು ಸ್ಯಾಂಡಲ್ ಎನ್ನುವ ಸಂಸ್ಥೆ ಕನ್ನಡಿಗರ ಕಠಿಣ ಪರಿಶ್ರಮದಿಂದ ನಿರ್ಮಾಣವಾದ ಸಂಸ್ಥೆಯಾಗಿದೆ. ಇಂತಹ ಹೆಮ್ಮೆಯ ಸಂಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಕನ್ನಡಿಗರನ್ನೇ ರಾಯಭಾರಿಯಾಗಿ ನೇಮಕ ಮಾಡಬೇಕು” ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ತೆಲುಗು ನಟಿ ತಮನ್ನಾ ಬಾಟಿಯಾರನ್ನು ಮೈಸೂರು ಸ್ಯಾಂಡಲ್ನ ರಾಯಭಾರಿಯಾಗಿ ಸರ್ಕಾರ ನೇಮಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಸಾಬೂನು ಎಂದ ಕೂಡಲೇ ಹಿರೋಯಿನ್ನೇ ಬೇಕೆಂಬುದು ಸರಿಯಲ್ಲ. ಈ ಉತ್ಪನ್ನಕ್ಕೆ ಲಿಂಗಭೇದದ ಅಗತ್ಯವಿಲ್ಲ. ಕ್ರಿಕೆಟ್ ಆಟಗಾರರು ಅಥವಾ ಒಳ್ಳೆಯ ನಾಯಕ ನಟರೂ ರಾಯಭಾರಿಯಾಗಿ ಸೇವೆ ಸಲ್ಲಿಸಬಹುದಿತ್ತು. ಈ ನಿರ್ಧಾರದಿಂದ ಕನ್ನಡಿಗರನ್ನು ಅವಮಾನಿಸಲಾಗಿದೆ” ಎಂದು ಖಡಕ್ ಟೀಕೆ ಮಾಡಿದ್ದಾರೆ.

ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಯದುವೀರ್ ಅವರನ್ನು ರಾಯಭಾರಿಯಾಗಿ ಮಾಡುವಂತೆ ಅಭಿಯಾನ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯದುವೀರ್, “ನನಗೆ ವೈಯಕ್ತಿಕವಾಗಿ ರಾಯಭಾರಿಯಾಗುವ ಆಸೆಯಿಲ್ಲ. ರಾಜಮನೆತನವು ವಾಣಿಜ್ಯ ಉದ್ದೇಶಕ್ಕೆ ಸೇವೆ ಮಾಡುವುದಿಲ್ಲ. ನಾವು ಸದಾ ಕನ್ನಡ ಬ್ರಾಂಡ್ಗಳ ಹಿತಕ್ಕಾಗಿ ನಿಲ್ಲುತ್ತೇವೆ” ಎಂದು ಸ್ಪಷ್ಟಪಡಿಸಿದರು.