
ಧರ್ಮಸ್ಥಳ: ಧರ್ಮಸ್ಥಳದ ‘ಸಮಾಧಿ ರಹಸ್ಯ ಪ್ರಕರಣ’ಕ್ಕೆ ಸಂಬಂಧಿಸಿದಂತೆ, ಮುಸುಕುಧಾರಿ ವ್ಯಕ್ತಿಯು ಗುರುತು ಮಾಡಿದ 13 ಸ್ಥಳಗಳಲ್ಲಿ ಶವಗಳ ಅವಶೇಷಗಳಿಗಾಗಿ ಇಂದು (ಮಂಗಳವಾರ, ಜುಲೈ 29) ಮಹತ್ವದ ಉತ್ಖನನ ಕಾರ್ಯ ನಡೆಯಲಿದೆ. ಎಸ್ಐಟಿ (ವಿಶೇಷ ತನಿಖಾ ದಳ) ಮತ್ತು ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಎಸ್ಐಟಿ ಅಧಿಕಾರಿಗಳ ನಿರ್ದೇಶನದ ಮೇರೆಗೆ, ಸ್ಥಳೀಯ ಗ್ರಾಮ ಪಂಚಾಯಿತಿಯು ಉತ್ಖನನ ಕಾರ್ಯಕ್ಕೆ 12 ಕಾರ್ಮಿಕರನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಭಾರೀ ಮಳೆ ಇದ್ದರೂ, ಶಸ್ತ್ರಸಜ್ಜಿತ ಎಎನ್ಎಫ್ (Anti-Naxal Force) ಸಿಬ್ಬಂದಿ ಸೋಮವಾರ ಮುಸುಕುಧಾರಿ ಗುರುತು ಮಾಡಿದ ಸ್ಥಳಗಳಿಗೆ ಬಿಗಿ ಭದ್ರತೆ ಒದಗಿಸಿದ್ದಾರೆ.

ಉತ್ಖನನ ಪ್ರಕ್ರಿಯೆ ಹೀಗಿರಲಿದೆ:
ಪುತ್ತೂರು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಉತ್ಖನನ ಕೆಲಸ ನಡೆಯಲಿದೆ. ನಿರ್ದಿಷ್ಟ ಸ್ಥಳಕ್ಕೆ ಹೊರಗಿನವರು ಪ್ರವೇಶಿಸದಂತೆ ಮತ್ತು ನೋಡಲು ಸಾಧ್ಯವಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಎಸ್ಐಟಿ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು (FSL), ಸ್ಥಳ ಪರಿಶೀಲನಾ ಅಧಿಕಾರಿಗಳು (SOCO), ಪಂಚರು, ಸಾಕ್ಷಿದಾರ (ಮುಸುಕುಧಾರಿ ವ್ಯಕ್ತಿ) ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಈ ಉತ್ಖನನ ಕೆಲಸ ನಡೆಯಲಿದೆ. ಆರಂಭದಲ್ಲಿ ಆರು ಅಡಿಗಳಷ್ಟು ಆಳಕ್ಕೆ ಅಗೆಯಲು ನಿರ್ಧಾರ ಮಾಡಲಾಗಿದ್ದು, ಸಾಕ್ಷಿದಾರ ಸೂಚಿಸಿದರೆ ಮತ್ತಷ್ಟು ಆಳಕ್ಕೆ ಅಗೆಯಲಾಗುವುದು ಎಂದು ಹೇಳಲಾಗಿದೆ.
ಒಂದು ವೇಳೆ ಉತ್ಖನನ ಸಮಯದಲ್ಲಿ ಅಸ್ಥಿಪಂಜರ ಪತ್ತೆಯಾದರೆ, ವೈದ್ಯಾಧಿಕಾರಿಗಳು ಸ್ಥಳದಲ್ಲಿಯೇ ಪರಿಶೀಲನೆ ನಡೆಸಲಿದ್ದಾರೆ. ನಂತರ ಹೆಚ್ಚಿನ ಪರೀಕ್ಷೆಗಾಗಿ ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುವುದು. ಒಂದು ವೇಳೆ ಅಸ್ಥಿಪಂಜರ ಅಥವಾ ಮೃತದೇಹದ ಭಾಗಗಳು ಪತ್ತೆಯಾಗದಿದ್ದರೆ, ಆ ಸ್ಥಳವನ್ನು ದಾಖಲೆಗಾಗಿ ಗುರುತು ಮಾಡಲಾಗುವುದು ಎಂದು ವರದಿಯಾಗಿದೆ.