
Dharmasthala Case : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ದ ತನಿಖೆಯು ಮುಕ್ತಾಯದ ಹಂತ ತಲುಪಿದೆ. ಇದರ ನಡುವೆಯೇ, ಈ ಪ್ರಕರಣಕ್ಕೆ ರಾಜ್ಯ ಮಹಿಳಾ ಆಯೋಗವು ಖಡಕ್ ಎಂಟ್ರಿ ಕೊಟ್ಟಿದ್ದು, ಸಮಗ್ರ ತನಿಖೆ ನಡೆಸುವಂತೆ ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ.
ಮಹಿಳಾ ಆಯೋಗದ ಪತ್ರದಲ್ಲಿನ ಪ್ರಮುಖಾಂಶಗಳು
ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಎಸ್ಐಟಿ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ:
- ವ್ಯಾಪ್ತಿ ವಿಸ್ತರಣೆಗೆ ಮನವಿ: ಧರ್ಮಸ್ಥಳದಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಕೇಳಿಬರುತ್ತಿರುವ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳ ಬಗ್ಗೆಯೂ ಎಸ್ಐಟಿ ಸಮಗ್ರವಾಗಿ ತನಿಖೆಯನ್ನು ನಡೆಸಬೇಕು.
- ಎಸ್ಐಟಿ ರಚನೆಯ ಆಶಯ: ಎಸ್ಐಟಿ ರಚನೆಯಾಗಬೇಕೆಂಬ ಆಯೋಗದ ಕೋರಿಕೆಯ ಆಶಯ ಮತ್ತು ಸರ್ಕಾರದ ಆದೇಶವು ಕೇವಲ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ:39/2025, ಕಲಂ 211 (ಎ), ಬಿಎನ್ಎಸ್ ಪ್ರಕರಣದ ತನಿಖೆಗೆ ಸೀಮಿತವಾಗಬಾರದು. ಇದು ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ಸಮಗ್ರ ತನಿಖೆಯನ್ನು ಸೂಚಿಸುತ್ತದೆ.
- ಪ್ರಸ್ತುತ ತನಿಖೆಯ ಮಿತಿ: ಮಾಧ್ಯಮ ವರದಿಗಳ ಪ್ರಕಾರ, ಎಸ್ಐಟಿ ರಚನೆಯಾದಾಗಿನಿಂದ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ‘ಚಿನ್ನಯ್ಯ’ ಎಂಬ ವ್ಯಕ್ತಿಯ ಹೇಳಿಕೆಯನ್ನಾಧರಿಸಿ, ಮಾನವ ಕಳೇಬರಗಳ ಉತ್ಖನನಕ್ಕೆ ಮಾತ್ರ ಸೀಮಿತವಾಗಿ ತನಿಖೆ ನಡೆದಿರುವುದು ಕಂಡುಬಂದಿದೆ.
- ಪೂರ್ಣ ಮಾಹಿತಿ ಕೋರಿಕೆ: ಉತ್ಖನನದಲ್ಲಿ ದೊರೆತ ಅಸ್ಥಿಪಂಜರಗಳ ಅವಶೇಷಗಳ ಬಗ್ಗೆ, ಅವುಗಳಲ್ಲಿ ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಬಗ್ಗೆ, ಮತ್ತು ಅಸಹಜ ಸಾವುಗಳ ಬಗ್ಗೆ ಪತ್ತೆ ಹಚ್ಚುವುದರ ಜೊತೆಗೆ, ಎಸ್ಐಟಿ ರಚನೆಯ ಮೂಲ ಆಶಯದಂತೆ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳುವಂತೆ (ಅಥವಾ ಈಗಾಗಲೇ ಕೈಗೊಂಡಿದ್ದರೆ ಆ ಬಗ್ಗೆ) ಕೂಡಲೇ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.



































