
ಬೆಂಗಳೂರು: ಧರ್ಮಸ್ಥಳ ಸುತ್ತಮುತ್ತ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ, ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣದ ತನಿಖಾ ವರದಿ ಸಲ್ಲಿಸಲು ತಡವಾಗುತ್ತಿರುವ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಾರಣವನ್ನು ಸ್ಪಷ್ಟಪಡಿಸಿದ್ದಾರೆ.
“ಪ್ರಕರಣದ ವರದಿಯನ್ನ ಎಲ್ಲಾ ಆಯಾಮಗಳಲ್ಲಿ ನೋಡಿ ಕೊಡಬೇಕಾಗುತ್ತದೆ. ಸದ್ಯ ತಾಂತ್ರಿಕ ಕಾರಣಗಳಿಂದ ವಿಳಂಬ ಆಗಿದೆ. ಮಹಿಳಾ ಆಯೋಗವು ಧರ್ಮಸ್ಥಳ ವಿಚಾರವಾಗಿ ಸಮಗ್ರ ತನಿಖೆ ಮಾಡುವಂತೆ ಮನವಿ ಮಾಡಿದೆ. ಸಮಗ್ರ ತನಿಖೆ ಆದರೆ ಎಲ್ಲಾ ಮಾಹಿತಿಗಳು ಹೊರಗೆ ಬರುತ್ತದೆ, ಅದನ್ನ ಮಾಡಲು ಸಮಯ ಬೇಕಾಗುತ್ತದೆ” ಎಂದು ಸಚಿವರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ದ ಮುಖ್ಯಸ್ಥರಿಗೆ ರಾಜ್ಯ ಮಹಿಳಾ ಆಯೋಗವು ಪತ್ರ ಬರೆದಿದ್ದು, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಜತೆಗೆ ಅಸಹಜ ಮತ್ತು ಅನುಮಾನಾಸ್ಪದ ಸಾವು ಪ್ರಕರಣಗಳ ಬಗ್ಗೆಯೂ ಸಮಗ್ರವಾಗಿ ತನಿಖೆಯನ್ನು ನಡೆಸಬೇಕೆಂದು ಕೋರಿತ್ತು. ಈ ವಿಸ್ತೃತ ತನಿಖೆಯ ಬೇಡಿಕೆಯಿಂದಾಗಿ ವರದಿ ಸಲ್ಲಿಸಲು ತಡವಾಗುತ್ತಿದೆ ಎಂದು ಗೃಹ ಸಚಿವರು ದೃಢಪಡಿಸಿದ್ದಾರೆ.
ಆಯೋಗದ ಪತ್ರದಲ್ಲಿದ್ದ ಪ್ರಮುಖಾಂಶಗಳು
ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ತಮ್ಮ ಪತ್ರದಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದರು:
- ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳು ಕೇಳಿಬರುತ್ತಿವೆ.
- ಎಸ್ಐಟಿ ರಚನೆಯ ಆಶಯವು ಕೇವಲ ಒಂದು ಕ್ರಿಮಿನಲ್ ಮೊಕದ್ದಮೆಯ ತನಿಖೆಗೆ ಸೀಮಿತವಾಗಬಾರದು. ಬದಲಿಗೆ, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ಸಮಗ್ರ ತನಿಖೆಯನ್ನು ಎಸ್ಐಟಿ ಮಾಡಬೇಕೆಂಬುದನ್ನು ಸೂಚಿಸುತ್ತದೆ.
- ಇಲ್ಲಿಯವರೆಗೆ, ಎಸ್ಐಟಿ ರಚನೆಯಾದಾಗಿನಿಂದ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ‘ಚಿನ್ನಯ್ಯ’ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಮಾನವ ಕಳೇಬರಗಳ ಉತ್ಖನನಕ್ಕೆ ಸೀಮಿತವಾಗಿ ತನಿಖೆ ನಡೆದಿರುವುದು ಕಂಡುಬಂದಿದೆ.
- ಉತ್ಖನನದಲ್ಲಿ ದೊರೆತ ಅಸ್ಥಿಪಂಜರಗಳ ಅವಶೇಷಗಳ ಬಗ್ಗೆ, ಸಾವು ಸಂಭವಿಸಿದ ಕಾರಣ ಮತ್ತು ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಬಗ್ಗೆ ಪೂರ್ಣ ಮಾಹಿತಿ ಪತ್ತೆ ಹಚ್ಚುವಂತೆ ಆಯೋಗವು ಎಸ್ಐಟಿಗೆ ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ, ಎಸ್ಐಟಿ ತನ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕಾದ ಕಾರಣ, ವರದಿ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದೆ.



































