
ಬೆಳ್ತಂಗಡಿ: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅನಾಮಿಕ ಗುರುತಿಸಿದ 13 ಸ್ಥಳಗಳ ಪೈಕಿ 3ನೇ ಸ್ಥಳದಲ್ಲಿಯೂ ಯಾವುದೇ ಕಳೇಬರ ಪತ್ತೆಯಾಗದಿರುವುದು ಎಸ್ಐಟಿ (Special Investigation Team) ಅಧಿಕಾರಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಕಾರ್ಯಾಚರಣೆ ಮುಂದುವರಿಕೆ, ಸಿಗದ ಕುರುಹು
ಜುಲೈ 30 ರಂದು ಎರಡನೇ ಗುರುತು ಮಾಡಿದ ಸ್ಥಳದಲ್ಲಿ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಮೂರನೇ ಗುರುತು ಮಾಡಿದ ಸ್ಥಳದಲ್ಲಿ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಆದರೂ, ಮೃತದೇಹದ ಯಾವುದೇ ಕುರುಹು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಕಾಡಿನಲ್ಲಿ ಸವಾಲುಗಳು, ಹೆಚ್ಚಿದ ಅನುಮಾನಗಳು
ಎಸ್ಐಟಿ ಅಧಿಕಾರಿಗಳು ಕಾಡಿನಲ್ಲಿ ಬೀಡುಬಿಟ್ಟಿದ್ದು, ಸೊಳ್ಳೆಗಳ ಕಾಟದಿಂದ ಅಲ್ಲೊಂದು ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾಮಿಕ ವ್ಯಕ್ತಿ ಜುಲೈ 28ರಂದು ಬಹಳ ನಿಖರವಾಗಿ 13 ಸ್ಥಳಗಳನ್ನು ಗುರುತಿಸಿ, ಅಲ್ಲಿ ಶವ ಹೂತು ಹಾಕಿರುವುದಾಗಿ ತಿಳಿಸಿದ್ದನು. ಅದರಂತೆ ಅಷ್ಟೂ ಸ್ಥಳಗಳಿಗೆ ಎ.ಎನ್.ಎಫ್. (Anti-Naxal Force) ಮತ್ತು ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
2019ರಲ್ಲಿ ಬೆಳ್ತಂಗಡಿಗೆ ಪ್ರವಾಹ ಎದುರಾದಾಗ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿ ಹಾನಿಯಾಗಿತ್ತು. ಒಂದು ವೇಳೆ ಅನಾಮಿಕ ಅಲ್ಲಿ ಶವ ಹೂತು ಹಾಕಿದ್ದರೆ, ಅದು ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆಗಳ ಬಗ್ಗೆ ಅನುಮಾನಿಸಲಾಗಿತ್ತು. ಆದರೆ, ಅರಣ್ಯದಲ್ಲಿ ಹೂತು ಹಾಕಿದ ಸ್ಥಳದಲ್ಲೂ ಮೃತದೇಹ ಸಿಗದಿರುವುದು ಪ್ರಕರಣವನ್ನು ಮತ್ತಷ್ಟು ಗೊಂದಲಮಯವಾಗಿಸಿದೆ.
ಮಧ್ಯಾಹ್ನದ ಬಳಿಕದ ಕಾರ್ಯಾಚರಣೆ ಯಾವ ಸ್ವರೂಪ ಪಡೆಯಬಹುದು ಎಂದು ಕಾದು ನೋಡಬೇಕಿದೆ. ಈ 13 ಸ್ಥಳಗಳಲ್ಲದೆ ಇಂತಹ ಇನ್ನೂ 8 ಪ್ರದೇಶಗಳಿವೆ ಎಂದು ಅನಾಮಿಕ ಹೇಳಿದ್ದಾನೆಂಬ ಮಾಹಿತಿಗಳಿದ್ದು, ಇವೆಲ್ಲದರ ಕಾರ್ಯಾಚರಣೆಗೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.