
ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲಿನ ವ್ಯವಸ್ಥಿತ ದೌರ್ಜನ್ಯ ಮತ್ತು ಅಟ್ಟಹಾಸಕ್ಕೆ ಮತ್ತೊಂದು ಬಲಿ ಸಂದಂತಾಗಿದೆ. ಇಂಧನ ತುಂಬಿಸಿಕೊಂಡು ಹಣ ನೀಡದೇ ದರ್ಪ ತೋರಿದ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರು, ಹಣ ಕೇಳಿದ ಪೆಟ್ರೋಲ್ ಬಂಕ್ ಸಿಬ್ಬಂದಿಯ ಮೇಲೆ ಕಾರು ಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನುಷ ಘಟನೆ ವರದಿಯಾಗಿದೆ.
ಶುಕ್ರವಾರ ಮುಂಜಾನೆ ಢಾಕಾ ಸಮೀಪದ ಪೆಟ್ರೋಲ್ ಬಂಕ್ವೊಂದರಲ್ಲಿ ಈ ಕೃತ್ಯ ನಡೆದಿದೆ. 30 ವರ್ಷ ಪ್ರಾಯದ ರಿಪನ್ ಸಹಾ ಎಂಬ ಯುವಕ ಮೃತಪಟ್ಟ ದುರ್ದೈವಿ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (BNP) ಮಾಜಿ ಮುಖಂಡ ಅಬುಲ್ ಹಶೇಮ್ ತನ್ನ ದುಬಾರಿ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಇಂಧನ ತುಂಬಿಸಲು ಬಂದಿದ್ದನು. ಇಂಧನ ಹಾಕಿಸಿಕೊಂಡ ನಂತರ ಪಾವತಿ ಮಾಡದೆ ಅಲ್ಲಿಂದ ನುಗ್ಗಲು ಯತ್ನಿಸಿದಾಗ, ತನ್ನ ಕರ್ತವ್ಯದ ಭಾಗವಾಗಿ ರಿಪನ್ ಸಹಾ ಹಣ ಕೇಳಲು ಮುಂದಾಗಿದ್ದಾನೆ.
ಈ ವೇಳೆ ಆರೋಪಿ ಅಬುಲ್ ಹಶೇಮ್, ರಿಪನ್ನನ್ನು ಸಾಯಿಸುವ ಉದ್ದೇಶದಿಂದಲೇ ಆತನ ಮೇಲೆ ವೇಗವಾಗಿ ಕಾರು ಹರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ರಿಪನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ನಡೆದ ಕೂಡಲೇ ಆರೋಪಿಗಳು ಪರಾರಿಯಾಗಲು ಯತ್ನಿಸಿದರೂ, ತನಿಖೆ ಕೈಗೆತ್ತಿಕೊಂಡ ಪೊಲೀಸರು ಅಬುಲ್ ಹಶೇಮ್ ಮತ್ತು ಆತನ ಚಾಲಕ ಕಮಲ್ ಹೊಸೈನ್ ಎಂಬುವವರನ್ನು ಬಂಧಿಸಿ ವಾಹನವನ್ನು ಜಪ್ತಿ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರಕ್ಕೆ ಈ ಘಟನೆ ಹೊಸ ಸೇರ್ಪಡೆಯಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.



































