
ಬೆಂಗಳೂರು: ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡು ಸಮವಸ್ತ್ರದ ಘನತೆಗೆ ಚ್ಯುತಿ ತಂದಿರುವ ಆರೋಪದ ಮೇಲೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಅಧಿಕಾರಿಯ ರಾಸಲೀಲೆಯ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಕಚೇರಿಯಲ್ಲೇ ಕುಳಿತು ಪೊಲೀಸ್ ಸಮವಸ್ತ್ರ ಧರಿಸಿಯೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯಗಳು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಈ ಗಂಭೀರ ಶಿಸ್ತು ಉಲ್ಲಂಘನೆಯನ್ನು ಪರಿಗಣಿಸಿದ ಸರ್ಕಾರ, ನಿನ್ನೆಯಷ್ಟೇ 10 ದಿನಗಳ ಕಡ್ಡಾಯ ರಜೆಯ ಮೇಲೆ ತೆರಳಿದ್ದ ರಾಮಚಂದ್ರ ರಾವ್ ಅವರ ಮೇಲೆ ರಾತ್ರೋರಾತ್ರಿ ಅಮಾನತ್ತಿನ ಆದೇಶ ಹೊರಡಿಸಿದೆ. ಈ ಕುರಿತು ಇಲಾಖಾ ವಿಚಾರಣೆ ಬಾಕಿಯಿರುವ ಕಾರಣ ಅಮಾನತು ಅನಿವಾರ್ಯ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸರಣಿ ವಿವಾದಗಳಲ್ಲಿ ಕುಟುಂಬ: ಡಿಜಿಪಿ ರಾಮಚಂದ್ರ ರಾವ್ ಅವರ ಈ ನಡವಳಿಕೆಯು ಮತ್ತಷ್ಟು ಚರ್ಚೆಗೆ ಗ್ರಾಸವಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಅವರ ಕುಟುಂಬದ ಹಿನ್ನೆಲೆ. ಒಂದು ಕಡೆ ಇವರ ಮಗಳು ರನ್ಯಾರಾವ್ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಲುಕಿ ಕಾನೂನು ಸಂಕಷ್ಟ ಎದುರಿಸುತ್ತಿದ್ದರೆ, ಇತ್ತ ಮಲತಂದೆಯಾದ ಐಪಿಎಸ್ ಅಧಿಕಾರಿಯ ಸರಸದ ವಿಡಿಯೋಗಳು ವೈರಲ್ ಆಗಿರುವುದು ಇಲಾಖೆಗೆ ಮುಜುಗರ ತಂದಿದೆ. ಈ ಘಟನೆಯು ರನ್ಯಾರಾವ್ ಪ್ರಕರಣಕ್ಕಿಂತ ಮೊದಲೇ ನಡೆದಿದ್ದು, ಈಗ ಸಾರ್ವಜನಿಕರ ಕೈ ಸೇರಿದೆ ಎನ್ನಲಾಗಿದೆ. ಉನ್ನತ ಮಟ್ಟದ ಅಧಿಕಾರಿಯೊಬ್ಬರ ಇಂತಹ ಬೇಜವಾಬ್ದಾರಿ ನಡವಳಿಕೆಯ ವಿರುದ್ಧ ಕಠಿಣ ತನಿಖೆಗೆ ಒತ್ತಾಯ ಕೇಳಿಬಂದಿದೆ.




































