
ಬೆಂಗಳೂರು: ರಾಜ್ಯದ ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿರುವ 9 ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಹಾಗೂ ಈ ಔಷಧಗಳನ್ನು ತಯಾರಿಸಿದ ಕಂಪೆನಿಗಳ ಮಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ಹೇರುವಂತೆ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಜನವರಿ 1ರಿಂದ ಫೆಬ್ರವರಿ 16ರ ವರೆಗೆ ರಾಜ್ಯದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಗಾದ ಈ ಔಷಧಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿಲ್ಲ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಈ ಔಷಧಗಳನ್ನು ತನ್ನ ಅಧೀನದ ಪ್ರಯೋಗಾಲಯಗಳಲ್ಲಿ ಪರಿಶೀಲಿಸಿ, ಅವುಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.
ಅನರ್ಹ ಔಷಧಗಳ ಮಾರಾಟ ತಡೆಗೆ ಕಠಿಣ ಕ್ರಮ
ಈ ಔಷಧಗಳನ್ನು ತಯಾರಿಸಿದ ಕಂಪೆನಿಗಳು ಉತ್ತಮ ಉತ್ಪಾದನಾ ಪದ್ಧತಿಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (CDSCO) ಪರಿಶೀಲಿಸಬೇಕು. ಅಲ್ಲಿಯವರೆಗೆ, ಈ ಸಂಸ್ಥೆಗಳ ಔಷಧಗಳ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಗುಂಡೂರಾವ್ ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ಐದು ತಾಯಂದಿರ ಸಾವಿನ ಘಟನೆ
ಇತ್ತೀಚೆಗೆ ಪಶ್ಚಿಮ ಬಂಗಾಳ ಮೂಲದ ಪಶ್ಚಿಮ್ ಬಂಗಾ ಫಾರ್ಮಾಸುಟಿಕಲ್ಸ್ ತಯಾರಿಸಿದ ಔಷಧ ಸೇವನೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಐವರು ತಾಯಂದಿರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದ್ದು, ಇತರ ಅಸುರಕ್ಷಿತ ಔಷಧಗಳ ಬಳಕೆಯನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿದೆ.
ಔಷಧ ಮಾರಾಟಕ್ಕೆ ಗಂಭೀರ ನಿಯಂತ್ರಣ ಕ್ರಮ ಬೇಕು
ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳ ಬಗ್ಗೆ ರಾಜ್ಯಗಳು ಮತ್ತು ಕೇಂದ್ರ ಪ್ರಯೋಗಾಲಯಗಳ ನಡುವೆ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆ ನಿರ್ಮಿಸಬೇಕು. ಜೊತೆಗೆ, ಜೀವಕ್ಕೆ ಹಾನಿಕಾರಕ ಔಷಧಗಳ ಬಗ್ಗೆ ವೈದ್ಯರು, ಫಾರ್ಮಾಸಿಸ್ಟ್ಗಳು ಹಾಗೂ ಸಾರ್ವಜನಿಕರಿಗೆ “ಎಚ್ಚರಿಕೆ ಅಲರ್ಟ್” ವ್ಯವಸ್ಥೆ ಜಾರಿಗೊಳಿಸಬೇಕು.
ಈ ಕುರಿತು ಕೇಂದ್ರ ಸರ್ಕಾರದ ಜತೆ ಕರ್ನಾಟಕ ಸರ್ಕಾರ ಸಕ್ರಿಯವಾಗಿ ಸಹಕರಿಸಲು ಸಿದ್ಧವಿದೆ ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.