
ನವದೆಹಲಿ: 2020ರಲ್ಲಿ ಸಂಭವಿಸಿದ ಗಲ್ವಾನ್ ಸಂಘರ್ಷದ ನಂತರ ಚೀನಾ ಮೂಲದ ಕಂಪನಿಗಳ ಮೇಲೆ ಹೇರಲಾಗಿದ್ದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಸಡಿಲಗೊಳಿಸಲು ಭಾರತ ಸರ್ಕಾರ ಈಗ ಗಂಭೀರ ಸಮಾಲೋಚನೆ ನಡೆಸುತ್ತಿದೆ. ಕಳೆದ 5 ವರ್ಷಗಳಿಂದ ಈ ಕಂಪನಿಗಳು ಭಾರತದ ಯಾವುದೇ ಸರ್ಕಾರಿ ಟೆಂಡರ್ ಅಥವಾ ಕಾಂಟ್ರ್ಯಾಕ್ಟ್ಗಳಲ್ಲಿ ಭಾಗವಹಿಸದಂತೆ ತಡೆಹಿಡಿಯಲಾಗಿತ್ತು. ಆದರೆ, ಬದಲಾದ ಭೌಗೋಳಿಕ ರಾಜಕೀಯ ಪರಿಸ್ಥಿತಿ ಹಾಗೂ ಆರ್ಥಿಕ ಅಗತ್ಯಗಳ ಹಿನ್ನೆಲೆಯಲ್ಲಿ ಈ ನಿರ್ಬಂಧಗಳನ್ನು ತೆಗೆದುಹಾಕುವ ಸಾಧ್ಯತೆ ದಟ್ಟವಾಗಿದೆ.
ವಿಶೇಷವಾಗಿ ಮೂಲಸೌಕರ್ಯ, ವಿದ್ಯುತ್ ಮತ್ತು ಉತ್ಪಾದನಾ ವಲಯಗಳಲ್ಲಿ ಎದುರಾಗುತ್ತಿರುವ ಕಚ್ಚಾ ವಸ್ತುಗಳ ಕೊರತೆ ಹಾಗೂ ಯೋಜನಾ ವಿಳಂಬವನ್ನು ತಪ್ಪಿಸಲು ಕೇಂದ್ರ ಹಣಕಾಸು ಸಚಿವಾಲಯವು ಈ ಬಗ್ಗೆ ಪ್ರಸ್ತಾಪ ಮುಂದಿಟ್ಟಿದೆ ಎನ್ನಲಾಗಿದೆ. ಚೀನಾ ಕಂಪನಿಗಳು ಈ ಹಿಂದೆ ಅಗ್ಗದ ದರದಲ್ಲಿ ಗುಣಮಟ್ಟದ ಉಪಕರಣಗಳನ್ನು ಪೂರೈಸುತ್ತಿದ್ದವು, ಆದರೆ ನಿರ್ಬಂಧದ ನಂತರ ಸಾರ್ವಜನಿಕ ವಲಯದ ಯೋಜನೆಗಳ ವೆಚ್ಚ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಗಡಿ ಭಾಗಗಳಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಯಶಸ್ವಿಯಾದ ಬೆನ್ನಲ್ಲೇ ಆರ್ಥಿಕ ಸಹಕಾರಕ್ಕೂ ಹಸಿರು ನಿಶಾನೆ ತೋರಿಸಲು ಕೇಂದ್ರ ಮುಂದಾಗಿದೆ.



































