
ನ್ಯೂ ದೆಹಲಿ: ಪತಂಜಲಿ ಸಂಸ್ಥಾಪಕ ಬಾಬಾ ರಾಮ್ ದೇವ್ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ದೆಹಲಿ ಹೈಕೋರ್ಟ್ ಮಂಗಳವಾರ (ಏಪ್ರಿಲ್ 22) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ಶರಬತ್ ಜಿಹಾದ್” ಎಂಬ ಪದ ಬಳಸಿ ಜನಪ್ರಿಯ ಪಾನೀಯ ರೂಹ್ ಅಫ್ಸಾವನ್ನು ಗುರಿಯಾಗಿಸಿಕೊಂಡ ಬಾಬಾ ರಾಮ್ ದೇವ್ ನ ವಿರುದ್ಧ ಹಮ್ ದರ್ದ್ ನ್ಯಾಶನಲ್ ಫೌಂಡೇಶನ್ ಇಂಡಿಯಾ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ಸಂಬಂಧದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ರಾಮ್ ದೇವ್ ನೀಡಿದ ಹೇಳಿಕೆ “ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ತರುವಂತಹದ್ದು” ಎಂದು ಕಿಡಿಕಾರಿದೆ. ಇಂತಹ ಹೇಳಿಕೆಗಳು ಧರ್ಮ ಆಧಾರಿತ ವಿಭಜನೆಗೆ ಕಾರಣವಾಗಬಹುದೆಂಬ ಆತಂಕವನ್ನು ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ.
ರಾಮ್ ದೇವ್ ಏನು ಹೇಳಿದ್ದಾರೆ?:
ಇತ್ತೀಚೆಗಷ್ಟೆ ಪತಂಜಲಿಯ “ರೋಸ್ ಶರಬತ್” ಬಿಡುಗಡೆ ಮಾಡಿದ ಬಾಬಾ ರಾಮ್ ದೇವ್, “ನಿಮಗೆ ಶರಬತ್ ನೀಡುವ ಒಂದು ಕಂಪನಿಯಿಂದ ಮದರಸಾ ಮತ್ತು ಮಸೀದಿಗಳ ನಿರ್ಮಾಣಕ್ಕಾಗಿ ಹಣ ಬಳಕೆಯಾಗುತ್ತದೆ. ಆದರೆ ಪತಂಜಲಿಯ ಶರಬತ್ ಸೇವಿಸಿದರೆ ಗುರುಕುಲ, ಯೂನಿವರ್ಸಿಟಿ ಮತ್ತು ಭಾರತೀಯ ಶಿಕ್ಷಣ ಮಂಡಳಿಗೆ ಸಹಾಯವಾಗುತ್ತದೆ” ಎಂದು ಹೇಳಿದ್ದಾರೆ.
ಅವರು ನೇರವಾಗಿ “ಹಮ್ ದರ್ದ್” ಅಥವಾ “ರೂಹ್ ಅಫ್ಸಾ” ಎಂದು ಉಲ್ಲೇಖಿಸಿಲ್ಲ, ಅವರ ಮಾತುಗಳು ಈ ಬ್ರ್ಯಾಂಡ್ಗಳನ್ನು ಗುರಿಯಾಗಿಸಿಕೊಂಡಿವೆ ಎಂಬಂತಿರುವುದರಿಂದ ಹಮ್ ದರ್ದ್ ಸಂಸ್ಥೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿದೆ. ತಮ್ಮ ಭಾಷಣದಲ್ಲಿ ಅವರು “ಇದು ಲವ್ ಜಿಹಾದ್ನಂತೆ ಶರಬತ್ ಜಿಹಾದ್ ಕೂಡಾ” ಎಂಬ ಹೇಳಿಕೆಯನ್ನು ನೀಡಿ, ಜನರ ಗಮನ ಸೆಳೆದಿದ್ದರು.
ನ್ಯಾಯಾಲಯದ ತೀರ್ಪು:
ರಾಮ್ ದೇವ್ ಈ ಹೇಳಿಕೆಯಿಂದ ಸಾರ್ವಜನಿಕರಲ್ಲಿ ದ್ವೇಷ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ತಿಳಿಸಿದೆ. ಯಾವುದೇ ವ್ಯಾಪಾರೋತ್ಪನ್ನವನ್ನು ಪ್ರಚಾರ ಮಾಡುವ ಸಮಯದಲ್ಲಿ, ಇಂತಹ ಪ್ರಚೋದನಕಾರಿ ಭಾಷೆಗಳನ್ನು ಬಳಸುವುದು ಸ್ವೀಕಾರಾರ್ಹವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.