
ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಯಾವುದೇ ಯತ್ನವನ್ನು ಸರ್ಕಾರ ಸಹಿಸದು. ಶಾಂತಿಭಂಗವಾದ ನಂತರ ಕ್ರಮಕೈಗೊಳ್ಳುವುದಕ್ಕಿಂತ, ಶಾಂತಿಯನ್ನು ಕಾಪಾಡಲು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯ. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನೇರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಮಾತನಾಡಿದರು. ಅವರು ರಾಜ್ಯದ ಕರಾವಳಿ ಭಾಗದಲ್ಲಿ ಮರುಕಳಿಸುತ್ತಿರುವ ಕೋಮುಸಂವೇದನಾಶೀಲ ಘಟನೆಗಳನ್ನು ಉಲ್ಲೇಖಿಸುತ್ತಾ, ಶಾಂತಿ ಭಂಗ ಉಂಟಾಗುತ್ತಿರುವ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದರು.
“ಕಾನೂನು ಸುವ್ಯವಸ್ಥೆ ಕದಡಿದರೆ ಡಿಸಿ, ಎಸ್ಪಿಗಳು ನೇರ ಹೊಣೆಗಾರರು. ದುಷ್ಟ ಶಕ್ತಿಗಳು ತಲೆ ಎತ್ತುವ ಮುನ್ನವೇ ಮೊಳಕೆಯಲ್ಲೇ ನಾಶಪಡಿಸಬೇಕಾಗಿದೆ. ಶಾಂತಿಭಂಗವಾದ ಮೇಲೆ ಪೋಸ್ಟ್ಮಾರ್ಟಮ್ ಮಾಡುವ ಪ್ರವೃತ್ತಿ ತಪ್ಪಬೇಕು” ಎಂದು ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಶಾಂತಿ ಸಮಿತಿಗಳ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳೇ ಇದ್ದಾರೆ. ಶಾಂತಿಯನ್ನು ಕಾಪಾಡುವುದು ಅವರ ನೇರ ಜವಾಬ್ದಾರಿ. ಆದರೆ ಶಾಂತಿಗೆ ಧಕ್ಕೆಯಾಗಿದೆಯೆಂದಾದರೆ, ತಕ್ಷಣ ಕ್ರಮ ಕೈಗೊಳ್ಳದಿರುವುದು ವಿಫಲತೆಯಾಗಿದೆ ಎಂದರು.
“ನಿಮ್ಮ ಎಲ್ಲಾ ಸವಲತ್ತುಗಳು — ಕಾರು, ಮನೆ, ಭದ್ರತಾ ಸಿಬ್ಬಂದಿ — ಜನರ ತೆರಿಗೆ ಹಣದಿಂದಲೇ ಸಿಗುತ್ತಿವೆ. ಈ ಹೊಣೆಗಾರಿಕೆಯನ್ನು ಮರೆಯಬಾರದು. ಜನಪರ ಧೋರಣೆಯೊಂದಿಗೆ ಕಾರ್ಯನಿರ್ವಹಿಸಿ. ಶಿಸ್ತು ತಪ್ಪಿದರೆ ರಾಜಿ ಇಲ್ಲ. ನಾವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಸಿಎಂ ತೀವ್ರ ಎಚ್ಚರಿಕೆ ನೀಡಿದರು.
ಕೆಲವು ಇಲಾಖೆಗಳು ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಶೇ. 100ರಷ್ಟು ಪಾಲನೆ ಮಾಡಿಲ್ಲ ಎಂಬ ಅಸಮಾಧಾನವೂ ಸಿಎಂ ವ್ಯಕ್ತಪಡಿಸಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.