
ದಾವಣಗೆರೆ: ವಿವಾಹವಾದ ಕೇವಲ 2 ತಿಂಗಳಲ್ಲೇ ಪತ್ನಿಯ ಅನೈತಿಕ ಸಂಬಂಧ ಮತ್ತು ಆಕೆಯ ವರ್ತನೆಯಿಂದ ಮನನೊಂದ ಪತಿ ಹಾಗೂ ಆಕೆಯ ಸೋದರ ಮಾವ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ.
ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದ ನಿವಾಸಿ ಹರೀಶ್ (32) ಮೃತಪಟ್ಟ ಪತಿ. ಹರೀಶ್ ಮತ್ತು ಸರಸ್ವತಿ ಎಂಬುವವರ ವಿವಾಹವು 2 ತಿಂಗಳ ಹಿಂದೆಯಷ್ಟೇ ಅದ್ಧೂರಿಯಾಗಿ ನೆರವೇರಿತ್ತು. ಈ ಮದುವೆಯನ್ನು ಸರಸ್ವತಿಯ ಸೋದರ ಮಾವ ರುದ್ರೇಶ್ ಅವರೇ ಮುಂದೆ ನಿಂತು ಮಾಡಿಸಿದ್ದರು. ಆರಂಭದಲ್ಲಿ ಸುಖವಾಗಿದ್ದ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದು, ನಾಲ್ಕು ದಿನಗಳ ಹಿಂದೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ ಸರಸ್ವತಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು.
ಇಷ್ಟಕ್ಕೇ ನಿಲ್ಲದ ಸರಸ್ವತಿ, ಪತಿ ಮತ್ತು ಅವರ ಕುಟುಂಬದ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದರಿಂದ ತೀವ್ರವಾಗಿ ನೊಂದ ಹರೀಶ್, “ಆಸ್ತಿಗಿಂತ ಮರ್ಯಾದೆ ಮುಖ್ಯ, ಪತ್ನಿ ಮತ್ತು ಆಕೆಯ ಕಡೆಯವರಿಂದ ಜೀವ ಬೆದರಿಕೆ ಇದೆ” ಎಂದು ಡೆತ್ನೋಟ್ ಬರೆದಿಟ್ಟು ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರೀಶ್ ಸಾವಿನ ಸುದ್ದಿ ಕೇಳಿದ ಸೋದರ ಮಾವ ರುದ್ರೇಶ್, ತಾವು ಮುಂದೆ ನಿಂತು ಮಾಡಿಸಿದ ಮದುವೆಯಿಂದ ಇಷ್ಟೆಲ್ಲಾ ಅನಾಹುತವಾಯಿತಲ್ಲ ಎಂಬ ನೋವಿನಿಂದ ಆನೆಕೊಂಡದಲ್ಲಿ ನೇಣಿಗೆ ಶರಣಾಗಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



































