
ಚಿಕ್ಕಮಗಳೂರು : ಪ್ರಿಯಕರನ ಜೊತೆ ಸೇರಿ ಸೊಸೆಯೊಬ್ಬಳು ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಅಜ್ಜಂಪುರ ತಾಲ್ಲೂಕಿನ ತಡಗ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೆ ಅಶ್ವಿನಿ ಮತ್ತು ಆಕೆಯ ಪ್ರಿಯಕರ ಆಂಜನೇಯನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 10ರಂದು ಸೊಸೆ ಅಶ್ವಿನಿ ಅವರ ಅತ್ತೆ ದೇವಿರಮ್ಮ ಮೃತಪಟ್ಟಿದ್ದರು. ಮನೆಯವರು ಇದನ್ನು ಸಹಜ ಸಾವು ಎಂದುಕೊಂಡು ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಮನೆಯಲ್ಲಿದ್ದ ₹20 ಲಕ್ಷ ಮೌಲ್ಯದ ಚಿನ್ನಾಭರಣ ಕಣ್ಮರೆಯಾಗಿತ್ತು. ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ, ತನಿಖೆ ವೇಳೆ ಸೊಸೆ ಅಶ್ವಿನಿ ನೀಡಿದ ದಾರಿತಪ್ಪಿಸುವ ಹೇಳಿಕೆಗಳಿಂದ ಪೊಲೀಸರಿಗೆ ಅನುಮಾನ ಮೂಡಿದೆ.
ಹೆಚ್ಚಿನ ವಿಚಾರಣೆ ನಡೆಸಿದಾಗ ಅಶ್ವಿನಿ ಚಿನ್ನಾಭರಣ ಕಳ್ಳತನ ಮಾತ್ರವಲ್ಲದೆ, ಅತ್ತೆಯ ಕೊಲೆಯ ರಹಸ್ಯವನ್ನೂ ಬಯಲು ಮಾಡಿದ್ದಾಳೆ. ತಾನು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಅತ್ತೆ ದೇವಿರಮ್ಮ ಅವರನ್ನು ರಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕದ್ದಿದ್ದ 218 ಗ್ರಾಂ ಚಿನ್ನವನ್ನು ಪ್ರಿಯಕರನಿಗೆ ನೀಡಿರುವುದಾಗಿಯೂ ಆಕೆ ತಿಳಿಸಿದ್ದಾಳೆ.
ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕಳವುಗೈದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ, ಸಹಜ ಸಾವು ಎಂದು ಭಾವಿಸಿದ್ದ ದೇವಿರಮ್ಮ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುರುವಾರ ಹೊರತೆಗೆಯಲು ಪೊಲೀಸರು ನಿರ್ಧರಿಸಿದ್ದಾರೆ.