
ಅಜ್ಮೀರ್: ತನ್ನ ಪ್ರಿಯಕರನಿಗೆ ಮಗು ಇಷ್ಟವಿರಲಿಲ್ಲ ಎಂಬ ಕಾರಣಕ್ಕೆ ಒಬ್ಬಳು ತಾಯಿ ತನ್ನ ಮೂರು ವರ್ಷದ ಮಗಳನ್ನು ಸರೋವರಕ್ಕೆ ಎಸೆದು ಕೊಂದಿರುವ ಅಮಾನವೀಯ ಘಟನೆ ರಾಜಸ್ಥಾನದ ಅಜ್ಮೀರ್ನಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಮಹಿಳೆ ಅಂಜಲಿ ಸಿಂಗ್ ಅಲಿಯಾಸ್ ಪ್ರಿಯಾಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮೂಲದವಳಾದ ಅಂಜಲಿ ತನ್ನ ಮೊದಲ ಪತಿಯಿಂದ ಬೇರ್ಪಟ್ಟ ನಂತರ, ರಾಜಸ್ಥಾನದ ಅಜ್ಮೀರ್ನಲ್ಲಿ ತನ್ನ ಗೆಳೆಯ ಅಖಿಲೇಶ್ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು. ಅಖಿಲೇಶ್ನಿಗೆ ಅಂಜಲಿಯ ಮಗು ಇಷ್ಟವಿರಲಿಲ್ಲ ಎಂದು ಹೇಳಲಾಗಿದ್ದು, ಈ ವಿಚಾರವನ್ನು ಅವನು ಅಂಜಲಿಯ ಬಳಿ ಹೇಳಿಕೊಂಡಿದ್ದನಂತೆ.
ಇವರಿಬ್ಬರ ಪ್ರೀತಿಯ ಬದುಕಿಗೆ ಮಗು ಅಡ್ಡಿಯಾಗಬಹುದು ಎಂದು ಭಾವಿಸಿದ ಅಂಜಲಿ, ತನ್ನ ಮಗುವನ್ನು ಸರೋವರಕ್ಕೆ ಎಸೆದು ಕೊಲೆ ಮಾಡಿದ್ದಾಳೆ. ಘಟನೆ ಬಳಿಕ ಅಂಜಲಿ ಮಗು ನಾಪತ್ತೆಯಾಗಿದೆ ಎಂದು ನಾಟಕವಾಡಿದ್ದಳು. ತಡರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಆಕೆಯ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ. ವಿಚಾರಣೆ ಮತ್ತು ಸಿಸಿಟಿವಿ ಕ್ಯಾಮೆರಾ ಪರಿಶೀಲನೆಯ ನಂತರ ಆಕೆಯ ಕ್ರೌರ್ಯ ಬಯಲಾಗಿದೆ. ಕೂಡಲೇ ಪೊಲೀಸರು ಅಂಜಲಿಯನ್ನು ಬಂಧಿಸಿದ್ದಾರೆ.



































