
ಬಂಟ್ವಾಳ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಪೊಲೀಸ್ ಉಪನಿರೀಕ್ಷಕರೊಬ್ಬರ ಫೋಟೋವನ್ನು ಬಳಸಿಕೊಂಡು, ಅವರ ಸಾವಿಗೆ ಮತ್ತು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್.ಐ.ಟಿ ತನಿಖೆಗೂ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ಗಳನ್ನು ಪ್ರಸಾರ ಮಾಡಿದ ನಾಲ್ಕು ಇನ್ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸ್ ಪುತ್ರಿಯಿಂದ ದೂರು
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೀರಪ್ಪ ಘಟಕಾಂಬಳೆ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪುತ್ರಿ ಕ್ಷಮಾ ಅವರು ಜುಲೈ 28, 2025 ರಂದು ತಮ್ಮ ಮೊಬೈಲ್ನಲ್ಲಿ ಸಾಮಾಜಿಕ ಜಾಲತಾಣ ಪರಿಶೀಲಿಸುತ್ತಿದ್ದಾಗ ಈ ಪೋಸ್ಟ್ಗಳು ಕಂಡುಬಂದಿವೆ. ಆ ನಾಲ್ಕು ಖಾತೆಗಳಲ್ಲಿ ತನ್ನ ತಂದೆಯ ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಹಾಕಿ, ಅವರ ಆತ್ಮಹತ್ಯೆ ಮತ್ತು ಧರ್ಮಸ್ಥಳ ಪ್ರಕರಣದ ನಡುವೆ ಸಂಬಂಧ ಕಲ್ಪಿಸುವಂತಹ ಪೋಸ್ಟ್ಗಳನ್ನು ಪ್ರಸಾರ ಮಾಡಿರುವುದು ಗಮನಕ್ಕೆ ಬಂದಿದೆ.
ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಯತ್ನ
ಈ ಪೋಸ್ಟ್ಗಳು ಉದ್ದೇಶಪೂರ್ವಕವಾಗಿ ತನ್ನ ತಂದೆಗೆ ಅವಮಾನ ಮಾಡುವ, ಶಾಂತಿ ಭಂಗ ಉಂಟುಮಾಡುವ ಮತ್ತು ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟಿಸುವಂತಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕಲಂ: 352, 353(1) ಮತ್ತು 353(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.