
ಬೆಂಗಳೂರು: ಪ್ರತಿ ಟನ್ ಕಬ್ಬಿಗೆ ₹3,500 ನೀಡಬೇಕು ಎಂಬ ರೈತರ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬ್ಬಿನ ದರವನ್ನು ಘೋಷಿಸಿದ್ದಾರೆ. ವಿವಿಧ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ, ಸರ್ಕಾರವು ಪ್ರತಿ ಟನ್ ಕಬ್ಬಿಗೆ ರೂ. 3,200 ನೀಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ದರವನ್ನು ಸಕ್ಕರೆ ರಿಕವರಿ (Recovery) ಪ್ರಮಾಣದ ಆಧಾರದ ಮೇಲೆ ನಿಗದಿಪಡಿಸಲಾಗಿದೆ:
- ಕಬ್ಬಿನ ರಿಕವರಿ 11.25 ರಷ್ಟಿದ್ದರೆ ಪ್ರತಿ ಟನ್ಗೆ ₹3,500 ನೀಡಲಾಗುತ್ತದೆ.
- ಕಬ್ಬಿನ ರಿಕವರಿ 10.25 ರಷ್ಟಿದ್ದರೆ ಪ್ರತಿ ಟನ್ಗೆ ₹3,100 ನೀಡಲಾಗುತ್ತದೆ.
ಪ್ರತಿಭಟನೆ ಕುರಿತು ಸರ್ಕಾರದ ನಿಲುವು
ಬೆಳಗಾವಿ, ಬಾಗಲಕೋಟೆ, ಬಿಜಾಪುರದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ಕುರಿತು ಇಂದಿನ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಸಿಎಂ ತಿಳಿಸಿದ್ದಾರೆ. “ನಾವು ಪ್ರತಿಭಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸುವಂತ ಕೆಲಸ ಮಾಡಿದ್ದೇವೆ. ನಮ್ಮ ಸರ್ಕಾರ ಯಾವತ್ತೂ ರೈತರ ಪರವಾಗಿರುವಂತದ್ದಾಗಿದೆ” ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚಿಸಲು ಸಚಿವರಾದ ಹೆಚ್.ಕೆ ಪಾಟೀಲ್ ಮತ್ತು ಎಂ.ಬಿ. ಪಾಟೀಲ್ ಅವರು ನಿನ್ನೆ ಮಾತುಕತೆ ನಡೆಸಿದ್ದರು. ಅಲ್ಲದೆ, ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಒಡೆತನದ ಸಕ್ಕರೆ ಕಾರ್ಖಾನೆಗಳ ಕುರಿತು ಪ್ರಸ್ತಾಪಿಸಿದ ಸಿಎಂ, ಸತೀಶ್ ಜಾರಕಿಹೊಳಿ ಅವರೂ ಕೂಡ ಡಿಸಿ, ಎಸ್ಪಿ ಅವರನ್ನು ರೈತರೊಂದಿಗೆ ಮಾತನಾಡಲು ಕಳುಹಿಸಿದ್ದರು ಎಂದರು.
ಈ ದರ ನಿಗದಿಯ ಕುರಿತು ರೈತರಿಗೆ ಈಗಾಗಲೇ ಮಾಹಿತಿ ಮುಟ್ಟಿಸಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.



































