
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಇತರ 7 ಆರೋಪಿಗಳು ಮತ್ತೆ ಜೈಲಿಗೆ ಸೇರಿದ್ದಾರೆ. ಈ ಘಟನೆ ರೇಣುಕಾಸ್ವಾಮಿ ಅವರ ಹುಟ್ಟೂರಾದ ಚಿತ್ರದುರ್ಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ನ್ಯಾಯಾಲಯದ ತೀರ್ಪಿನಿಂದ ಒಂದು ಹಂತದ ಸಮಾಧಾನ ಸಿಕ್ಕಿದೆಯಾದರೂ, ಮಗನನ್ನು ಕಳೆದುಕೊಂಡ ನೋವು ಕುಟುಂಬದವರನ್ನು ಇಂದಿಗೂ ಕಾಡುತ್ತಿದೆ. ಈ ನಡುವೆ, “ಮುಂದೊಂದು ದಿನ ದರ್ಶನ್ ಅಥವಾ ಅವರ ಕುಟುಂಬದವರು ಬಂದು ಕ್ಷಮೆ ಕೇಳಿದರೆ ಒಪ್ಪಿಕೊಳ್ಳುತ್ತೀರಾ?” ಎಂಬ ಮಾಧ್ಯಮಗಳ ಪ್ರಶ್ನೆಗೆ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥ್ ಶಿವನಗೌಡರ ಅವರು ಖಡಕ್ ಉತ್ತರ ನೀಡಿದ್ದಾರೆ.
ಚಿತ್ರದುರ್ಗದ ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶಿನಾಥ್ ಶಿವನಗೌಡರ, “ನಾನು ಯಾರನ್ನೂ ವೈಯಕ್ತಿಕವಾಗಿ ದೂಷಣೆ ಮಾಡುವ ವ್ಯಕ್ತಿ ಅಲ್ಲ. ಆದರೆ ನನ್ನ ಮಗನಿಗೆ ಅನ್ಯಾಯ ಮಾಡಿದವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗದಿದ್ದರೆ, ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ” ಎಂದು ಭಾವುಕರಾಗಿ ನುಡಿದರು.
“ನಮಗೆ ನಂಬಿಕೆ ಇರುವುದು ಕೇವಲ ಕಾನೂನಿನ ಮೇಲೆ ಮಾತ್ರ. ಸತ್ಯ ಮತ್ತು ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು. ದೊಡ್ಡವರಾಗಲಿ ಅಥವಾ ಚಿಕ್ಕವರಾಗಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಅಂತಹ ತೀರ್ಪು ಬಂದರೆ ಮಾತ್ರ ನನ್ನ ಮಗನಿಗೆ ನಿಜವಾದ ನ್ಯಾಯ ಸಿಕ್ಕಿದಂತಾಗುತ್ತದೆ” ಎಂದು ಅವರು ಹೇಳಿದರು.
“ಅಂತಹ ದೊಡ್ಡ ನಟರು ಯಾಕೆ ಇಂತಹ ಕ್ರೂರ ಕೃತ್ಯಕ್ಕೆ ಕೈ ಹಾಕಿದರು ಎಂದು ನಮಗೆ ಇಂದಿಗೂ ಅರ್ಥವಾಗುತ್ತಿಲ್ಲ. ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಕೊಡಬೇಕಾದವರೇ ಈ ರೀತಿ ವರ್ತಿಸಿದ್ದು ನೋವು ತಂದಿದೆ. ಮನುಷ್ಯತ್ವವನ್ನು ಮರೆತು ಒಬ್ಬ ಮನುಷ್ಯನ ಪ್ರಾಣ ತೆಗೆಯುವುದು ಯಾವ ನ್ಯಾಯ? ಕ್ಷಮೆ ಕೇಳುವುದರಿಂದ ನಮ್ಮ ಮಗ ವಾಪಸ್ಸು ಬರುವುದಿಲ್ಲ. ಆ ನೋವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಕಣ್ಣೀರಿಟ್ಟರು.
“ಭವಿಷ್ಯದಲ್ಲಿ ದರ್ಶನ್ ಕ್ಷಮೆ ಕೇಳಿದರೂ, ನಮಗೆ ಬೇಕಾಗಿರುವುದು ಕೇವಲ ನ್ಯಾಯ. ಈ ಘಟನೆ ಎಲ್ಲರಿಗೂ ಒಂದು ಪಾಠವಾಗಬೇಕು ಮತ್ತು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬುದು ನಮ್ಮ ಆಶಯ. ನಮ್ಮ ಸೊಸೆ ಸಹನಾಗೆ ಸರ್ಕಾರ ಉದ್ಯೋಗ ಒದಗಿಸುವ ಮೂಲಕ ಆಕೆಯ ಬದುಕಿಗೆ ಆಧಾರವಾಗಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಒಟ್ಟಿನಲ್ಲಿ, ರೇಣುಕಾಸ್ವಾಮಿ ಕುಟುಂಬವು ಹಣ ಅಥವಾ ಕ್ಷಮೆಗೆ ಮಣಿಯದೆ, ಕೇವಲ ಕಾನೂನುಬದ್ಧ ಹೋರಾಟ ಮತ್ತು ನ್ಯಾಯದ ನಿರೀಕ್ಷೆಯಲ್ಲಿರುವುದು ಸ್ಪಷ್ಟವಾಗಿದೆ. ಇಡೀ ಸಮಾಜವು ಈ ಪ್ರಕರಣದ ನ್ಯಾಯಯುತ ಅಂತ್ಯಕ್ಕಾಗಿ ಕಾಯುತ್ತಿದೆ.