
ಹೆಬ್ರಿ : “ಮಕ್ಕಳು ಉದ್ಯಾನವನದ ಮೊಗ್ಗುಗಳಂತೆ. ಇಂದಿನ ಮಕ್ಕಳು ನಾಳೆಯ ಭವಿಷ್ಯವನ್ನು ನಿರ್ಮಿಸುತ್ತಾರೆ. ಆದ್ದರಿಂದ ನಿಮ್ಮ ಕನಸುಗಳು ದೊಡ್ಡದಾಗಿರಲಿ. ಸರಿಯಾದ ಶಿಕ್ಷಣದಿಂದ ಮಾತ್ರ ನಿಮ್ಮ ಕನಸುಗಳು ನನಸಾಗಿ ಸಮಾಜದ ವ್ಯವಸ್ಥೆ ಚೆನ್ನಾಗಿ ಸಾಗಿ ದೇಶವು ಅಭಿವೃದ್ಧಿಯತ್ತ ಮುಂದುವರಿಯಲು ಸಾಧ್ಯ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಲ್ಲಿದ್ದ ಶಿಸ್ತು, ಶಾಂತಿ, ಸೌಹಾರ್ದತೆ, ದುಡಿಮೆಗಳು ಭಾರತೀಯರಿಗೆ ಸದಾ ಆದರ್ಶಗಳಾಗಿವೆ. ನೆಹರೂರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡರು. ಅಲ್ಲದೆ ಸ್ವಾತಂತ್ರ್ಯಗಳಿಸಿದ ನಂತರ ಭಾರತವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದರು. ದೇಶದಲ್ಲಿ ಉದ್ಯೋಗ ಹೆಚ್ಚಳಕ್ಕೆ ಆದ್ಯತೆ ನೀಡಿ ದೇಶದ ಅಭಿವೃದ್ಧಿಗೆ ಶ್ರಮಿಸಿದರು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದ ನೆಹರೂ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಮಕ್ಕಳು ಇವತ್ತು ಮಾತ್ರ ಲವಲವಿಕೆಯಿಂದ ಇರುವುದಲ್ಲದೆ ಉತ್ತಮ ಶಿಕ್ಷಣವನ್ನು ಪಡೆದು ಸದಾ ಕಾಲ ಜೀವನೋತ್ಸಾಹವನ್ನು ಬೆಳೆಸಿಕೊಂಡು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಿ” ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.

ಅವರು ತಮ್ಮ ಶಾಲೆ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಪಾಲ್ಗೊಂಡು ನೆಹರೂರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮಕ್ಕಳ ದಿನಾಚರಣೆಯ ಕುರಿತಾಗಿ ವಿದ್ಯಾರ್ಥಿ ನಾಯಕ ಕಾರ್ತಿಕ್, ಸ್ನೇಹಾ, ಚಿರಾಯು, ಪ್ರತೀಕ್, ಗಗನ್, ಪ್ರತೀಕ್ಷಾ ಕುಲಾಲ್, ಸಹನಾ ಹೆಚ್, ಪ್ರಥ್ವಿನ್, ವಂಶಿಕಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕರಾದ ಮಹೇಶ್ ನಾಯ್ಕ್, ಶ್ಯಾಮಲಾ, ಚಂದ್ರಕಾಂತಿ ಹೆಗ್ಡೆ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಶಿಕ್ಷಕ ರಘುಪತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ , ಪಿ. ವಿ. ಆನಂದ ವಂದಿಸಿದರು.



































