
ಚಿಕ್ಕಮಗಳೂರು: ಟ್ರಕ್ಕಿಂಗ್ ಮಾಡಲು ಬಂದ 10 ಮೆಡಿಕಲ್ ವಿದ್ಯಾರ್ಥಿಗಳು ದಟ್ಟ ಕಾಡಿನಲ್ಲಿ ದಾರಿ ತಪ್ಪಿ ನಿತ್ರಾಣಗೊಂಡು, ಪೊಲೀಸರು ಮತ್ತು ಸ್ಥಳೀಯರ ಸಹಯೋಗದಿಂದ 2ಗಂಟೆ ರಾತ್ರಿಗೆ ಅವರನ್ನು ರಕ್ಷಿಸಿದ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು ಮತ್ತು 5 ಹುಡುಗಿಯರು ಬಲ್ಲಾಳರಾಯನದುರ್ಗದಿಂದ ಟ್ರಕ್ಕಿಂಗ್ ಪ್ರಾರಂಭಿಸಿದ್ದರು. ಆದರೆ, ದಾರಿ ತಪ್ಪಿ ಅವರು ದಟ್ಟ ಕಾಡಿನಲ್ಲಿ ಸಿಕ್ಕಿಹಾಕಿಕೊಂಡರು. ದೀರ್ಘ ಸಮಯ ಅಲೆದಾಟದ ನಂತರ ಅವರು ದಣಿದು ನಿತ್ರಾಣಗೊಂಡಿದ್ದರು.
ವಿದ್ಯಾರ್ಥಿಗಳು ಕಾಡಿನಲ್ಲಿ ಕಳೆದುಹೋಗಿದ್ದಾರೆಂದು ತಿಳಿದು ಪೊಲೀಸರು , ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಸಂಜೆ 6 ಗಂಟೆಯಿಂದ ಹುಡುಕಾಟ ಆರಂಭಿಸಿದರು. ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಮತ್ತು ಸ್ನೇಕ್ ರೆಸ್ಕ್ಯೂ ತಂಡದ ಆರಿಫ್ ಅವರ ನೇತೃತ್ವದಲ್ಲಿ ರಾತ್ರಿ 2ಗಂಟೆಗೆ ವಿದ್ಯಾರ್ಥಿಗಳನ್ನು ಕಾಡಿನಿಂದ ಸುರಕ್ಷಿತವಾಗಿ ಕರೆ ತರಲಾಯಿತು.
ರಕ್ಷಣೆ ನೀಡಿದ ಪೊಲೀಸರು ಮತ್ತು ಸ್ಥಳೀಯರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸೂಚಿಸಿದ್ದಾರೆ.