
ಚಿಕ್ಕಮಗಳೂರು: ರಜಾ ದಿನಗಳಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಚಿಕ್ಕಮಗಳೂರು ಜಿಲ್ಲೆಯ ಸುಂದರ ತಾಣ ಕೆಮ್ಮಣ್ಣುಗುಂಡಿ, ಶನಿವಾರ ದಂಪತಿಗಳ ಪಾಲಿಗೆ ದುಃಖದ ಸ್ಥಳವಾಯಿತು. ಪತ್ನಿಯೊಂದಿಗೆ ಸುಂದರ ಕ್ಷಣಗಳನ್ನು ಸೆಲ್ಫಿಯಲ್ಲಿ ಸೆರೆಹಿಡಿಯಲು ಹೋಗಿ ಶಿಕ್ಷಕರೊಬ್ಬರು ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ದುರ್ದೈವಿ ಶಿಕ್ಷಕ ಸಂತೋಷ್ (40), ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದವರಾಗಿದ್ದು, ತರೀಕೆರೆ ತಾಲ್ಲೂಕಿನ ಲಕ್ಷ್ಮೀಸಾಗರ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸಂಭವಿಸಿದ ದುರಂತದ ವಿವರಗಳು: ಶನಿವಾರದಂದು ದಸರಾ ರಜೆಯ ಸಂತೋಷದಲ್ಲಿ ಪತ್ನಿ ಶ್ವೇತಾ ಅವರೊಂದಿಗೆ ಕೆಮ್ಮಣ್ಣುಗುಂಡಿ ಪ್ರವಾಸಕ್ಕೆ ಬಂದಿದ್ದ ಸಂತೋಷ್, ಅಲ್ಲಿನ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದರು. ಕೆಮ್ಮಣ್ಣುಗುಂಡಿ ಪಾರ್ಕ್ ವೀಕ್ಷಿಸಿದ ನಂತರ, ವೀಕ್ಷಣಾ ಸ್ಥಳಕ್ಕೆ ತೆರಳಿದರು. ಇದೇ ವೇಳೆ, ಅಲ್ಲಿನ ಕಡಿದಾದ ಪ್ರಪಾತದ ಅಂಚಿನಲ್ಲಿ ನಿಂತು ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ದುರದೃಷ್ಟವಶಾತ್, ಅವರ ಕಾಲು ಜಾರಿ ನೂರಾರು ಅಡಿಗಳ ಆಳಕ್ಕೆ ಬಿದ್ದಿದ್ದಾರೆ. ತಕ್ಷಣವೇ ತಲೆಗೆ ಕಲ್ಲು ಬಂಡೆಗಳು ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮದುವೆಯಾಗಿ 5 ವರ್ಷ: 5 ವರ್ಷಗಳ ಹಿಂದೆ ಮದುವೆಯಾಗಿದ್ದ ಸಂತೋಷ್ ಮತ್ತು ಶ್ವೇತಾ, ಪ್ರೀತಿ ಮತ್ತು ಸಂತೋಷದ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಆದರೆ, ಕೆಮ್ಮಣ್ಣುಗುಂಡಿಯಲ್ಲಿನ ಈ ದುರಂತ ಅವರ ಬದುಕಿನಲ್ಲಿ ಕರಾಳ ಅಧ್ಯಾಯವನ್ನು ಸೃಷ್ಟಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಲಿಂಗದಳ್ಳಿ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಹಗ್ಗಗಳ ಮೂಲಕ ಸಂತೋಷ್ ಅವರ ದೇಹವನ್ನು ಮೇಲೆತ್ತಿದರು. ಈ ಸಂಬಂಧ ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































