
ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಗುರುಪುರ ಗ್ರಾಮದಲ್ಲಿ ಆನೆ ದಾಳಿಗೆ ರೈತ ಮೃತಪಟ್ಟ ಘಟನೆ ಸೋಮವಾರ (ಮಾರ್ಚ್ 31) ನಡೆದಿದೆ. ವೆಂಕಟೇಶ್ (58) ಮೃತ ರೈತ.
ಏಕಾಂಗಿ ಸಲಗದ ಅಟ್ಟಹಾಸ :
ಬೆಳಗಿನ ಜಾವ ತನ್ನ ತೋಟದಲ್ಲಿ ಹಸುಗಳನ್ನು ಕಟ್ಟುತ್ತಿದ್ದ ವೇಳೆ ಒಂಟಿ ಸಲಗವು ದಾಳಿ ಮಾಡಿದೆ. ಆನೆ ಉಸಿರಾಟದ ಶಬ್ದ ಕೇಳಿ ಗಮನಿಸಿದ ವೆಂಕಟೇಶ್ ಟಾರ್ಚ್ ಬೆಳಗಿಸಿದ್ದಾನೆ. ಆದರೆ, ಬೆಳಕು ನೋಡುತ್ತಿದ್ದಂತೆಯೇ ಆನೆ ಆಕ್ರೋಶಗೊಂಡು ರೈತನನ್ನು ಸೊಂಡಿಲಿನಿಂದ ಹಿಡಿದು ತೆಂಗಿನ ಮರಕ್ಕೆ ಹೊಡೆದು ಬಿಸಾಕಿದೆ. ಪರಿಣಾಮ ಸ್ಥಳದಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಸಾರ್ವಜನಿಕರಿಂದ ಮನವಿ :
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಕ್ಕವಳ್ಳಿ ಹೋಬಳಿ ನಿವಾಸಿಗಳು ಈ ಒಂಟಿ ಸಲಗದ ಹಾವಳಿಯಿಂದ ತೀವ್ರ ಅಸಮಾಧಾನಗೊಂಡಿದ್ದು, ಕೇವಲ ಪರಿಹಾರ ನೀಡುವುದರಿಂದ ಸಮಸ್ಯೆ ಪರಿಹಾರವಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆನೆಯನ್ನು ಬೇಗ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.