
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆತ ಮರುದಿನವೇ ದುರಂತವೊಂದು ಸಂಭವಿಸಿದೆ. ಚಾಮುಂಡಿಬೆಟ್ಟದ ಪ್ರಸಿದ್ಧ ಚಾಮುಂಡೇಶ್ವರಿ ದೇಗುಲದ ಅರ್ಚಕ ರಾಜು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಕಾರಣದಿಂದಾಗಿ ದೇವಾಲಯದ ಗರ್ಭಗುಡಿಗೆ ಮಂಗಳವಾರ ತೆರೆ ಎಳೆಯಲಾಗಿದೆ.
ಕಳೆದ ಹಲವು ವರ್ಷಗಳಿಂದ ದೇವಾಲಯದಲ್ಲಿ ಶಿವನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜು ಅವರ ಹಠಾತ್ ನಿಧನದಿಂದ ಚಾಮುಂಡಿಬೆಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ. ಈ ಘಟನೆಯಿಂದಾಗಿ ಇಂದು ರಾತ್ರಿವರೆಗೂ ಮೂಲ ವಿಗ್ರಹದ ದರ್ಶನ ಇರುವುದಿಲ್ಲ. ಆದಾಗ್ಯೂ, ಉತ್ಸವಮೂರ್ತಿಯ ದರ್ಶನಕ್ಕೆ ಮಾತ್ರ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಅರ್ಚಕರ ಅಂತ್ಯಸಂಸ್ಕಾರದ ಬಳಿಕ ಗರ್ಭಗುಡಿಯ ಬಾಗಿಲು ತೆರೆಯಲಾಗುವುದು. ಉಳಿದಂತೆ ದಸರಾ ನವರಾತ್ರಿ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ಎಂದಿನಂತೆಯೇ ಮುಂದುವರಿಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ದಸರಾ ಆರಂಭಗೊಂಡ ಮರುದಿನವೇ ಸಂಭವಿಸಿದ ಈ ದುರ್ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭಗೊಂಡಿವೆ.



































