
ಕುಂದಾಪುರ : ಸಾಮಾಜಿಕ ಕಾರ್ಯಕರ್ತ ಹಾಗೂ ಉಪನ್ಯಾಸಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ದಾಖಲಾದ ಆರೋಪ ಮತ್ತು ಪೊಲೀಸ್ ನೋಟೀಸ್ಗಳಿಗೆ ಪ್ರತಿಕ್ರಿಯಿಸಿರುವ ಅವರು, “ನನ್ನನ್ನು ರೌಡಿಶೀಟರ್ ಅಥವಾ ಗೂಂಡಾ ಎನಿಸಿ ಗಡಿಪಾರು ಮಾಡಲು ಸಾಧ್ಯವಿಲ್ಲ. ನಾನು ಸಮಾಜದ ಮಧ್ಯೆ ಓಡಾಡುವ ವ್ಯಕ್ತಿ, ಕಳ್ಳತನ ಮಾಡಿ ತಲೆಮರೆಸಿಕೊಂಡವನಲ್ಲ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸೂಲಿಬೆಲೆ ವಿರುದ್ಧ ಕೋಮುವಾದದ ಆರೋಪ?
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನ್ನ ಭಾಷಣಗಳಲ್ಲಿ ಕೋಮುವಾದ ಪ್ರಚೋದನೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. “ಮುಸ್ಲಿಮರಿಗೆ ಜ್ಞಾನ ಸಿಗುವ ವಿಷಯಗಳನ್ನು ಮಾತ್ರ ಹೇಳಿದ್ದೇನೆ. ಕೋಮುವಾದ ಎಂಬ ಹಳೆಯ ಟ್ಯಾಗ್ ಮತ್ತೆ ಹಾಕಲು ಪ್ರಯತ್ನವಾಗುತ್ತಿದೆ,” ಎಂದು ಹೇಳಿದರು.
ಅಖಂಡ ಭಾರತ ವಿಷಯವೂ ನಿರ್ಬಂಧಿತವೇ?
ಅವರು “ಅಖಂಡ ಭಾರತದ ಕುರಿತು ಮಾತನಾಡಬೇಡಿ, ರಾಜಕೀಯ ವಿಷಯ ಹೇಳಬೇಡಿ” ಎಂಬಂತೆ ಕುಂದಾಪುರ ಪೊಲೀಸರು ಹೊಸ ನಿಯಮಗಳನ್ನು ಹೊರತಂದಿರುವುದು ಖಂಡನೀಯ ಎಂದರು. “ಈ ಎಲ್ಲಾ ಪ್ರಕ್ರಿಯೆಗಳು ನನ್ನ ಬಗ್ಗೆ ಇರುವ ಹೆದರಿಕೆಯಿಂದ ಆಗುತ್ತಿದೆ. ನನ್ನ ವಾಕ್ ಸ್ವಾತಂತ್ರ್ಯವನ್ನು ಸಿದ್ದರಾಮಯ್ಯ ನೀಡಿಲ್ಲ; ಅದನ್ನು ಅಂಬೇಡ್ಕರ್ ಸಂವಿಧಾನ ಒದಗಿಸಿದೆ,” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.
ಎಫ್ಐಆರ್, ಒತ್ತಡ ಮತ್ತು NSUI ಪಾತ್ರ
“ಮಂಗಳೂರಿನಲ್ಲಿ ಹಿಂದೂಗಳು ಎಲ್ಲಾ ಮತಪಂಥದವರನ್ನೂ ಮದುವೆಯಾಗಲಿ ಎಂದು ಹೇಳಿದ್ದಕ್ಕೆ ಎಫ್ಐಆರ್ ದಾಖಲಾಗಿತ್ತು. ಈಗ NSUI ಮೂಲಕ ಕೂಡ ಒತ್ತಡ ಹಾಕಲಾಗಿದೆ. ಸ್ಥಳೀಯ ಆಯೋಜಕರ ಮೇಲೆ ಟಿಪ್ಪಣಿಗಳನ್ನಿಟ್ಟು ಕಾರ್ಯಕ್ರಮವನ್ನೇ ತಡೆಹಿಡಿಯಲು ಪ್ರಯತ್ನವಾಗುತ್ತಿದೆ,” ಎಂದು ಅವರು ಆರೋಪಿಸಿದರು.