
ಕೊಪ್ಪಳ: ಬಿಗ್ ಬಾಸ್ ಕನ್ನಡ ಖ್ಯಾತಿಯ ಪ್ರಖರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲಾ ಕಾನೂನು ಸಂಕೋಲೆಗಳಿಂದ ಮುಕ್ತರಾಗಿದ್ದಾರೆ. ಕಳೆದ 9 ವರ್ಷಗಳಿಂದ ಗಂಗಾವತಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ 5 ಪ್ರತ್ಯೇಕ ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ ಅವರು ಸಂಪೂರ್ಣ ನಿರ್ದೋಷಿಯಾಗಿ ಹೊರಬಂದಿದ್ದಾರೆ. ಈ ಮೂಲಕ ದೀರ್ಘಾವಧಿಯ ಕಾನೂನು ಹೋರಾಟಕ್ಕೆ ಬಿಡುಗಡೆಯ ನಿಟ್ಟುಸಿರು ಸಿಕ್ಕಂತಾಗಿದೆ.
ತಮ್ಮ ಸುದೀರ್ಘ ಹೋರಾಟದ ಪಯಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ರಾಜಕೀಯ ಪಿತೂರಿಗಳು ಮತ್ತು ನಂಬಿದವರಿಂದ ಅನುಭವಿಸಿದ ನಿರಾಸೆಗಳನ್ನು ಹಂಚಿಕೊಂಡಿದ್ದಾರೆ. ಒಂದು ನಿರ್ದಿಷ್ಟ ಸದ್ಧಾಾಂತಿಕ ಮತ್ತು ರಾಜಕೀಯ ಸಿದ್ಧಾಾಂತಕ್ಕಾಗಿ ತಾವು ನಡೆಸಿದ ಹೋರಾಟಕ್ಕೆ ಅಂತಿಮವಾಗಿ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಗಂಗಾವತಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದುತ್ವ ಸಂಘಟನೆಗಳು ಹಾಗೂ ಬಿಜೆಪಿ ಪರವಾಗಿ ಚೈತ್ರಾ ಕುಂದಾಪುರ ಅವರು ಪ್ರಚಾರ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಎದುರಾಳಿಗಳು ಹೂಡಿದ್ದ ನಿಂದನೆ, ಮಾನಹಾನಿ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಅವರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿತ್ತು. ಸದ್ಯ ಈ ಎಲ್ಲಾ ಆರೋಪಗಳಿಂದ ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿದೆ.
ಪ್ರಮುಖಾಂಶಗಳು:
- 9 ವರ್ಷಗಳ ಸುದೀರ್ಘ ಹೋರಾಟ: 2018ರ ರಾಜಕೀಯ ಘಟನಾವಳಿಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣಗಳಿಗೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ.
- 5 ಮೊಕದ್ದಮೆಗಳಿಂದ ಮುಕ್ತಿ: ಚೈತ್ರಾ ಕುಂದಾಪುರ ವಿರುದ್ಧ ದಾಖಲಾಗಿದ್ದ ಎಲ್ಲಾ 5 ಪ್ರಕರಣಗಳು ಖುಲಾಸೆಯಾಗಿವೆ.
- ಗಂಗಾವತಿಯ ನಂಟು: ತಮ್ಮ ಸಾಮಾಜಿಕ ಬದುಕಿಗೆ ದೊಡ್ಡ ತಿರುವು ನೀಡಿದ್ದ ಗಂಗಾವತಿಯೊಂದಿಗಿನ ಕಾನೂನು ಬಂಧ ಕಳಚಿದೆ ಎಂದು ಚೈತ್ರಾ ಹರ್ಷ ವ್ಯಕ್ತಪಡಿಸಿದ್ದಾರೆ.
- ಲಕ್ಷಾಂತರ ಅಭಿಮಾನಿಗಳ ಪ್ರೀತಿ: ವಯಸ್ಸಿನ ಭೇದವಿಲ್ಲದೆ ಸಾರ್ವಜನಿಕರು ನೀಡುವ ‘ಅಕ್ಕ’ ಎಂಬ ಗೌರವವೇ ತಮ್ಮ ಬದುಕಿನ ದೊಡ್ಡ ಗಳಿಕೆ ಎಂದಿದ್ದಾರೆ.
































