
ಯು.ಬಿ.ಎನ್.ಡಿ : ಖ್ಯಾತ ಯೋಗ ಗುರು, ಪದ್ಮಶ್ರೀ ಪುರಸ್ಕೃತ ಬಾಬಾ ಶಿವಾನಂದ್ ಭಾನುವಾರ 128ನೇ ವಯಸ್ಸಿನಲ್ಲಿ ನಿಧನರಾದರು. ಇಂದಿನ ಬಾಂಗ್ಲಾದೇಶದ ಸಿಟ್ ಜಿಲ್ಲೆಯಲ್ಲಿ 1896ರ ಆಗಸ್ಟ್ 8ರಂದು ಜನಿಸಿದ್ದ ಅವರು ಆರು ವರ್ಷದೊಳಗೇ ತಮ್ಮ ಪೋಷಕರನ್ನು ಕಳೆದುಕೊಂಡು ತಪಸ್ಸು ಮತ್ತು ಶಿಸ್ತಿನ ಜೀವನವನ್ನು ಅಳವಡಿಸಿಕೊಂಡಿದ್ದರು.
ಅರ್ಧ ಹೊಟ್ಟೆಯ ಆಹಾರ, ನಿಯಮಿತ ಯೋಗಾಭ್ಯಾಸ ಮತ್ತು ಆತ್ಮಶುದ್ಧಿಯಿಂದ ಬದುಕಿದ ಅವರು ಪ್ರತಿದಿನ ಮುಂಜಾನೆ 3 ಗಂಟೆಗೆ ಎದ್ದು ಎಲ್ಲ ಕಾರ್ಯಗಳನ್ನು ಸ್ವತಃ ಮಾಡುತ್ತಿದ್ದರು. ತಾನು ಬೇಯಿಸಿದ ಆಹಾರವನ್ನೇ ಸೇವಿಸುವ ಅವರು ಚಾಪೆಯ ಮೇಲೆ ಮಲಗುತ್ತಿದ್ದರು.
ಯೋಗ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಮಹತ್ತರ ಕೊಡುಗೆಗಾಗಿ ಅವರಿಗೆ 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಬಾಬಾ ಶಿವಾನಂದ್ ಅವರ ನಿಧನದ ಸುದ್ದಿ ಕೇಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. “ಅವರ ಜೀವನದ ಶಿಸ್ತಿನಿಂದ ಪ್ರತಿಯೊಬ್ಬರೂ ಪ್ರೇರಣೆ ಪಡೆಯಬೇಕು” ಎಂದು ಪ್ರಧಾನಿ ಹೇಳಿದ್ದಾರೆ.