
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗಿನ ಅಕ್ರಮ ಚಟುವಟಿಕೆಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೋಮವಾರ ಬೆಳಿಗ್ಗೆ ಸಿಸಿಬಿ (ಸಿಟಿ ಕ್ರೈಮ್ ಬ್ರಾಂಚ್) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿದೆ.
ದಾಳಿ ವೇಳೆ ಕೈದಿಗಳು ಬಳಸುತ್ತಿದ್ದ ಗಾಂಜಾ, ಬೀಡಿ, ಸಿಗರೇಟು ಪ್ಯಾಕ್, ಚಾಕು, ಕತ್ತರಿ, ಮೊಬೈಲ್ ಚಾರ್ಜರ್, ಲೈಟರ್, ಪ್ಲೇ ಕಾರ್ಡ್, ಆಟದ ಪುಸ್ತಕ, ಬೆಂಕಿಪೊಟ್ಟಣ, ಕಬ್ಬಿಣದ ರಾಡು, ಬಿಸಿ ನೀರು ಕಾಯಿಸಲು ಬಳಸುವ ಕಾಯ್ಲು, ಟ್ರಿಮರ್ ಸೇರಿದಂತೆ ಹಲವು ನಿಷೇಧಿತ ವಸ್ತುಗಳನ್ನು ಸಿಸಿಬಿ ತಂಡ ಪತ್ತೆ ಹಚ್ಚಿದೆ. ಇಬ್ಬರು ಕೈದಿಗಳ ಬಳಿ ₹16,000 ನಗದನ್ನು ಜಪ್ತಿ ಮಾಡಲಾಗಿದೆ.
ಜೈಲಿನ ವಿವಿಧ ಬ್ಯಾರಕ್ಗಳಲ್ಲಿ ಸಿಗರೇಟು ಮತ್ತು ಬೀಡಿ ಪೊಟ್ಟಣಗಳು ಅಪಾರ ಪ್ರಮಾಣದಲ್ಲಿ ದೊರೆತಿದ್ದು, ಕೈದಿಗಳು ಗಾಂಜಾ ಸೇವನೆಗೆ ಬಳಸುತ್ತಿದ್ದ ಕೊಳವೆಗಳು ಕೂಡ ಪತ್ತೆಯಾಗಿದೆ.
ಮುನ್ಸೂಚನೆ ನೀಡದೆ ದಾಳಿ
ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ತಪಾಸಣೆಯಲ್ಲಿ ಈ ವಸ್ತುಗಳು ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಯಾರು ಈ ನಿಷೇಧಿತ ವಸ್ತುಗಳನ್ನು ಪೂರೈಸುತ್ತಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಆಪ್ತ ಸಮಾಲೋಚಕರ ಬಂಧನವೇ ದಾಳಿಗೆ ನಾಂದಿ
ಈ ಹಿಂದೆ ಜೈಲಿನ ಆಪ್ತ ಸಮಾಲೋಚಕರಾದ ನವ್ಯಶ್ರೀ (33) ಮತ್ತು ಸೃಜನ್ (33) ಎಂಬವರು ಕೈದಿಗಳಿಗೆ ಕದಿಯಲಾದ ಮೊಬೈಲ್ಗಳನ್ನು ಪೂರೈಸುತ್ತಿದ್ದರೆಂದು ಸಿಸಿಬಿಗೆ ಮಾಹಿತಿ ಲಭ್ಯವಾಯಿತು. ಈ ಆರೋಪಿಗಳ ಬಂಧನ ಬಳಿಕ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ದೃಢವಾಗಿ, ಇದೀಗ ಸಿಸಿಬಿ ದಾಳಿ ನಡೆಸಿದೆ.
ಹಿಂದೆಯೂ ನಡೆದಿದ್ದ ದಾಳಿಗಳು
2024ರ ಸೆಪ್ಟೆಂಬರ್ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದ ವೇಳೆ, ವಿಶೇಷ ಆತಿಥ್ಯ ವಾದನೆ ಬಳಿಕ ಸಿಸಿಬಿ ದಾಳಿ ನಡೆಸಿತ್ತು. ಮೊಬೈಲ್, ಪೆನ್ಡ್ರೈವ್, ಚಾಕು ಪತ್ತೆಯಾಗಿತ್ತು. ಕಳೆದ ಮೇ 25ರಂದು ನಡೆದ ದಾಳಿಯಲ್ಲೂ ನಗದು, ಎಲೆಕ್ಟ್ರಿಕ್ ಸ್ಟೌ, ಮೊಬೈಲ್ ಪತ್ತೆಯಾಗಿತ್ತು.