
ಮಲಪ್ಪುರಂ: ಮದ್ಯದ ಅಮಲಿನಲ್ಲಿದ್ದ ಅಣ್ಣನೊಬ್ಬ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಮಲಪ್ಪುರಂನ ವಯಿಕಡವ್ನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಬಾಬು ವರ್ಗೀಸ್ (52) ಮತ್ತು ಆರೋಪಿ ಆತನ ಅಣ್ಣ ರಾಜು ಮತ್ತಾಯಿ (54) ಎಂದು ಗುರುತಿಸಲಾಗಿದೆ. ಈ ಸಂಬಂಧ ಪೊಲೀಸರು ರಾಜು ಮತ್ತಾಯಿಯನ್ನು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಅಣ್ಣ-ತಮ್ಮಂದಿರು ಇಬ್ಬರೂ ನಿಯಮಿತವಾಗಿ ಮದ್ಯಪಾನ ಮಾಡುತ್ತಿದ್ದು, ಅಮಲೇರಿದಾಗ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ಕೂಡ ಇವರಿಬ್ಬರ ನಡುವೆ ಮಾತು-ಮಾತಿಗೆ ಜಗಳ ತಾರಕಕ್ಕೇರಿದೆ. ಕೋಪಗೊಂಡ ರಾಜು, ಕತ್ತಿಯಿಂದ ಬಾಬು ವರ್ಗೀಸ್ ಅವರಿಗೆ ಇರಿದಿದ್ದಾನೆ. ಗಂಭೀರ ಗಾಯಗೊಂಡ ಬಾಬು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿ, ಆರೋಪಿ ರಾಜು ಮತ್ತಾಯಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



































