
ಕಾರ್ಕಳ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನ್ಯಾಯಾಲಯದ ಆದೇಶ ಜಾರಿಯ ನೆಪದಲ್ಲಿ ಬೆಳಗಿನ ಜಾವ 4:30ರ ಸುಮಾರಿಗೆ ಮಹಿಳೆಯರಿದ್ದ ಮನೆಗೆ ನುಗ್ಗಿ ಯುವತಿಯೊಬ್ಬಳಿಗೆ ಪುರುಷ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿರುವ ಘಟನೆಯನ್ನು ಹಿಂದೂ ಸಮಾಜ ಗಂಭೀರವಾಗಿ ಪರಿಗಣಿಸಿದೆ ಎಂದು ರಮಿತ ಸೂರ್ಯವಂಶಿ ಹೇಳಿದ್ದಾರೆ.
ರಮಿತ ಸೂರ್ಯವಂಶಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯ ಚಿಕ್ಕಮ್ಮನ ಮನೆಗೆ ಮಹಿಳಾ ಪೊಲೀಸರು ಇಲ್ಲದೆ ಕೇವಲ ಪುರುಷ ಪೊಲೀಸರು ನುಗ್ಗಿ, ಅಕ್ಷತಾ ಪೂಜಾರಿ ಎಂಬ ಮುಗ್ಧ ಯುವತಿಗೆ ಹಲ್ಲೆ ನಡೆಸಿದ್ದಾರೆ ಎಂದು ರಮಿತ ಸೂರ್ಯವಂಶಿ ಆರೋಪಿಸಿದ್ದಾರೆ.
ದೂರು ದಾಖಲಿಸದೆ ಸುಳ್ಳು ಕೇಸು ದಾಖಲು?
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ, ಠಾಣಾಧಿಕಾರಿಗಳು ಹಲ್ಲೆಗೊಳಗಾದ ಯುವತಿ ಅಕ್ಷತಾ ಪೂಜಾರಿಯವರ ಕೇಸನ್ನು ದಾಖಲಿಸದೆ, ಬದಲಿಗೆ ಪೊಲೀಸರನ್ನು ರಕ್ಷಿಸುವ ಸಲುವಾಗಿ ಅಕ್ಷತಾ ಪೂಜಾರಿ ಮತ್ತು ಅವರ ತಾಯಿಯ ಮೇಲೆ ‘ಕರ್ತವ್ಯಕ್ಕೆ ಅಡ್ಡಿ’ ಎಂಬ ಸುಳ್ಳು ಕೇಸು ದಾಖಲಿಸಿದ್ದು ಎಷ್ಟು ಸರಿ ?? ಎಂದು ರಮಿತ ಸೂರ್ಯವಂಶಿ ಪ್ರಶ್ನಿಸಿದ್ದಾರೆ.
“ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕೇಸು ದಾಖಲಿಸಿ ಯುವತಿಗೆ ನ್ಯಾಯ ಒದಗಿಸಬೇಕು. ಅಕ್ಷತಾ ಪೂಜಾರಿ ಅವರ ಜೊತೆ ಹಿಂದೂ ಸಮಾಜ ಜೊತೆಯಾಗಿ ನಿಲ್ಲುವ ಅಗತ್ಯ ಇದೆ” ಎಂದು ಅವರು ಹೇಳಿದ್ದಾರೆ.
ರಕ್ಷಣೆಯೇ ಇಲಾಖೆಯ ಆದ್ಯತೆಯಾಗಲಿ
ಈ ರೀತಿಯ ಘಟನೆಗಳು ಪುನರಾವರ್ತನೆ ಆಗಬಾರದು. ಕಾನೂನು ವ್ಯವಸ್ಥೆಯಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡಬೇಕಾದ ಆರಕ್ಷಕರು, ರಕ್ಷಕರಾಗಿ ಇರಬೇಕು. ಈ ಇಲಾಖೆಯ ಮೇಲೆ ಇರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ರಮಿತ ಸೂರ್ಯವಂಶಿ ಅವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.



































