
ಬ್ರಹ್ಮಾವರ: ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನ ಹೊಂದಿರುವ ಗೋಮಾತೆಗೆ ‘ರಾಷ್ಟ್ರ ಮಾತೆ’ ಎಂಬ ಅಧಿಕೃತ ಗೌರವ ನೀಡಬೇಕು ಹಾಗೂ ಗೋ ಸಂರಕ್ಷಣೆಗಾಗಿ ಬಲಿಷ್ಠ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಗೋಮಾತೆ ಗೌರವ ಅಭಿಯಾನದ ವತಿಯಿಂದ ಇಂದು ಬ್ರಹ್ಮಾವರದಲ್ಲಿ ಬೃಹತ್ ಮನವಿ ಸಲ್ಲಿಸಲಾಯಿತು. ಬ್ರಹ್ಮಾವರ ತಾಲ್ಲೂಕು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈ ಪ್ರಸ್ತಾವನೆಯನ್ನು ರವಾನಿಸಲಾಗಿದೆ.
ಶ್ರೀ ಕ್ಷೇತ್ರ ಶಂಕರಪುರದ ಪೀಠಾಧ್ಯಕ್ಷರಾದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೋಸೇವೆಯ ಮಹತ್ವ ಮತ್ತು ಪ್ರಸ್ತುತ ಎದುರಾಗಿರುವ ಸವಾಲುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೆ, ಆರ್ಥಿಕ ಮತ್ತು ಕಾನೂನಾತ್ಮಕವಾಗಿಯೂ ಗೋವಿನ ರಕ್ಷಣೆಯಾಗಬೇಕು ಎಂಬುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಅಭಿಯಾನದ ಪ್ರಮುಖ ಬೇಡಿಕೆಗಳು ಇಲ್ಲಿವೆ:
- ರಾಷ್ಟ್ರ ಮಾತೆ ಮಾನ್ಯತೆ: ಗೋವಿಗೆ ಸಾಂವಿಧಾನಿಕವಾಗಿ ‘ರಾಷ್ಟ್ರ ಮಾತೆ’ ಎಂಬ ಗೌರವದ ಸ್ಥಾನಮಾನ ನೀಡಬೇಕು.
- ಕೇಂದ್ರೀಯ ಕಾನೂನು: ಗೋವುಗಳ ರಕ್ಷಣೆಗಾಗಿ ದೇಶಾದ್ಯಂತ ಏಕರೂಪದ ಕೇಂದ್ರೀಯ ಕಾನೂನು ಜಾರಿಗೆ ತರಬೇಕು.
- ಸತ್ಯವಾಲಯ ಸ್ಥಾಪನೆ: ಗೋ ಸೇವೆ ಮತ್ತು ಸಂಶೋಧನೆಗಾಗಿ ಪ್ರತ್ಯೇಕ ಕೇಂದ್ರೀಯ ಸತ್ಯವಾಲಯವನ್ನು ನಿರ್ಮಿಸಬೇಕು.
- ಮೇವು ಮತ್ತು ಕೃಷಿ ನೀತಿ: ಗೋ ಆಧಾರಿತ ನೈಸರ್ಗಿಕ ಕೃಷಿಗೆ ಉತ್ತೇಜನ ಮತ್ತು ಗೋವುಗಳಿಗಾಗಿ ಪ್ರತ್ಯೇಕ ಮೇವು ಭದ್ರತಾ ನೀತಿ ರೂಪಿಸಬೇಕು.
- ಹತ್ಯೆ ನಿಷೇಧ: ಭಾರತದಾದ್ಯಂತ ಸಂಪೂರ್ಣ ಗೋಹತ್ಯೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಗೊಳಿಸಬೇಕು.
ವಿವರವಾಗಿ ಮಾತನಾಡಿದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು, ಗೋ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ರೈತರ ಆರ್ಥಿಕತೆಯನ್ನು ಬಲಪಡಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ದೇಶದ ಕೃಷಿ ಮತ್ತು ಸಂಸ್ಕೃತಿಯ ಬೆನ್ನೆಲುಬು. ಹಾಗಾಗಿ ಸರ್ಕಾರವು ಗೋ ಆಧಾರಿತ ಆರ್ಥಿಕ ನೀತಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಭಿಯಾನದ ಪ್ರಮುಖರಾದ ರಾಘವೇಂದ್ರ ಪ್ರಭು ಕವಾರ್ಲು, ಸುಂದರ ಪೂಜಾರಿ ಮೂಡುಕುಕ್ಕುಡೆ, ಮಧುಸೂದನ್ ಹೇರೂರು ಸೇರಿದಂತೆ ಶ್ರೀನಾಥ್ ಕೋಟ, ಸತ್ಯ ರಾಜ್ ಮತ್ತು ಸತೀಶ್ ಅವರು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದರು.



































