
ಬೆಂಗಳೂರು: ಕರಿಮೆಣಸು (Black Pepper) ದರ ಕಳೆದ ಎರಡು ವರ್ಷಗಳಲ್ಲಿ ಶೇ. 40ರಷ್ಟು ಏರಿಕೆಯಾಗಿದೆ. ಪೂರೈಕೆ ಕೊರತೆ ಹಾಗೂ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಇದರ ದರ ಮತ್ತಷ್ಟು ಏರಬಹುದು ಎಂದು ವರದಿಯಾಗಿದೆ. ಇದೀಗ ಕಾಳು ಮೆಣಸು ಕೆಜಿಗೆ ₹900ರಿಂದ ₹1,100 ರವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಸಂಘಗಳು ಹೇಳಿವೆ.
ಕರ್ನಾಟಕದಲ್ಲಿ ಹವಾಮಾನ ಬದಲಾವಣೆ, ಅಕಾಲಿಕ ಮಳೆಯಂತಹ ಅನಿಯಂತ್ರಿತ ಪರಿಸ್ಥಿತಿಗಳಿಂದಾಗಿ ಕೊಡಗು, ಚಿಕ್ಕಮಗಳೂರು ಮುಂತಾದ ಪ್ರಮುಖ ಪ್ರದೇಶಗಳಲ್ಲಿ ಮೆಣಸು ಬೆಳೆ ತುಂಬಾ ಕುಸಿತ ಕಂಡಿದೆ. ಬೆಳೆಗಳಿಗೆ ರೋಗಬಾಧೆ ಸಹ ಸಂಭವಿಸಿದ್ದು, ಇದರಿಂದ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ವಿಯಟ್ನಾಂ ಮತ್ತು ಬ್ರೆಜಿಲ್ನಂತಹ ಕಾಳು ಮೆಣಸು ಉತ್ಪಾದಕ ರಾಷ್ಟ್ರಗಳಲ್ಲಿ ಸಹ ಕೊಯ್ಲು ಕಡಿಮೆಯಾಗಿದೆ. ಇದರಿಂದ ಜಾಗತಿಕ ಪೂರೈಕೆ ಹೊರೆಗೆ ಒತ್ತಡ ಉಂಟಾಗಿ, ಭಾರೀ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಕರ್ನಾಟಕ ಸಾಂಬಾರು ಸಂಘ ಹಾಗೂ ಚಿಕ್ಕಮಗಳೂರು ಪಾಂಟರ್ಸ್ ಅಸೋಸಿಯೇಷನ್ ತಿಳಿಸಿವೆ.
ಕರಿಮೆಣಸು ಬೆಳೆಯಲು ತೇವಾಂಶವುಳ್ಳ ಗಾಳಿ, ನೆರಳು ಪ್ರದೇಶ ಹಾಗೂ ನೀರಿನ ಅಂಶವಿರುವ ಮಣ್ಣು ಬೇಕಾಗುತ್ತದೆ. ಪಶ್ಚಿಮ ಘಟ್ಟ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಇದಕ್ಕೆ ಪೂರಕ ವಾತಾವರಣ ಇದ್ದರೂ, ಹವಾಮಾನ ವೈಪರೀತತೆ ಈ ಬಾರಿ ಬೆಳೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ದೊಡ್ಡ ಸವಾಲಾಗಿದೆ ಎಂದು ರೈತರು ಹೇಳುತ್ತಿದ್ದಾರೆ.



































