
ತಪ್ಪು ಮಾಡಿದ ವ್ಯಕ್ತಿಗಳ ಮೇಲೆ, ಹಿಂಸೆಯನ್ನು ಪ್ರಚೋದಿಸುವವರ ಮೇಲೆ, ಕೊಲೆ, ಹಲ್ಲೆ, ಅತ್ಯಾಚಾರ, ಅನಾಚಾರ, ರೌಡಿಸಮ್ ನಡೆಸುವವರ ಮೇಲೆ, ಹಾಗೂ ಅದನ್ನು ಬೆಂಬಲಿಸುವವರ ಮೇಲೆ ಕೇಸ್ ದಾಖಲಿಸುವುದನ್ನು ಪ್ರಬುದ್ಧ ನಾಗರಿಕ ಸಮಾಜ ಖಂಡಿತಕ್ಕೂ ಒಪ್ಪುತ್ತದೆ ಮತ್ತು ಗೌರವಿಸುತ್ತದೆ.ಹೀಗಿರುವಾಗ ತಪ್ಪು ಮಾಡಿದವರ ಮೇಲೆ ಕೇಸ್ ದಾಖಲಾದ ಕೂಡಲೇ ಅದು ಹಿಂದೂ ಸಮಾಜದ ಮೇಲೆ ದಾಳಿ, ಹಿಂದೂ ನಾಯಕರ ಮೇಲೆ ದಾಳಿ, ಹಿಂದುಗಳನ್ನು ಹೆದರಿಸುವ ಬೆದರಿಸುವ ತಂತ್ರ ಅಂತೆಲ್ಲ ಬಿಜೆಪಿಯ ನಾಯಕರು ಹೇಳೋದು ಖಂಡನೀಯ. ಮಾತ್ರವಲ್ಲ ಅದು ಕೂಡಾ ಧರ್ಮದ್ರೋಹ, ಸಮಾಜದ್ರೋಹ, ರಾಷ್ಟ್ರ ದ್ರೋಹವೇ ಆಗುತ್ತದೆ.ಇಂತಹ ಹೇಳಿಕೆ ಶಾಂತಿಯ, ಸೌಹಾರ್ದದ ಪರವಾಗಿರುವ ನಾಗರಿಕರಿಗೆ ಮಾಡುವ ಅವಮಾನವಾಗುತ್ತದೆ ಎಂಬುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿಯ ನಾಯಕರುಗಳು ಅರ್ಥ ಮಾಡಿಕೊಳ್ಳಬೇಕು.
ನಮ್ಮ ಸಮಾಜದ ಶಾಂತಿ ಭಂಗವಾಗುವ ರೀತಿಯ ಉದ್ರೇಕಕಾರಿ ಭಾಷಣ, ವಿಷಕಾರುವ ಭಾಷಣ ಮಾಡಿದ ನಾಯಕರ ಮೇಲೆ ಕೇಸ್ ಆದರೆ ಅದು ಹಿಂದೂ ಸಮಾಜದ ಮೇಲೆ ದಾಳಿ ಎಂದು ಬಿಜೆಪಿಯ ನಾಯಕರುಗಳು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ನಮ್ಮ ಸರಕಾರ ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಬಿಜೆಪಿಯವರು ಮಾಡುವುದು ಬಿಟ್ಟು ಹಿಂದುಗಳನ್ನೇ ಟಾರ್ಗೆಟ್ ಮಾಡುತ್ತಾ ಇದ್ದೀರಿ ಅಂತ ಸುಳ್ಳು ಆರೋಪ ಮಾಡುತ್ತಾ ಹಿಂದುಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ಧಾರೆ.
ಇಂತಹ ಗಿಮಿಕ್ ಗಳನ್ನು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಸಂಘಪರಿವಾರದ ಸಂಘಟನೆಗಳು ಹಿಂದೂ ಸಂಘಟನೆಗಳು ಅಲ್ಲಾ, ಅದರ ನಾಯಕರು ಸಮಸ್ತ ಹಿಂದೂ ಸಮಾಜದ ನಾಯಕರೂ ಅಲ್ಲಾ, ಅದರ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಲು ಹಿಂದುತ್ವದ ಹೆಸರಿನಲ್ಲಿ ಅಮಾಯಕ ಹಿಂದೂ ಯುವಕರ, ಹಿಂದೂ ಮುಸ್ಲಿಂ ಸಮಾಜದ ಜನರ ಜೀವನದ ಜೊತೆ ಅಟವಾಡುತ್ತಿದ್ದಾರೆ.
ಈ ಸತ್ಯವನ್ನು ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಯ ಬುದ್ದಿವಂತ ನಾಗರಿಕರು ಅರಿಯಬೇಕಿದೆ. ಹಾಗೂ ಎಲ್ಲಾ ನಾಗರಿಕರು ಸತ್ಯದ ಪರನಿಂತು ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ ಗೊಳ್ಳುವ ಪೊಲೀಸ್ ಇಲಾಖೆಯ ಪರನಿಂತು ಅವರಿಗೆ ಧೈರ್ಯ ತುಂಬಿ ಸಹಕಾರ ನೀಡುವ ಅಗತ್ಯವಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಅನಿತಾ ಡಿಸೋಜರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.