
ಪಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರೋಹ್ತಾಸ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.
ರ್ಯಾಲಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಜಾತಿ ಆಧಾರಿತ ಜನಗಣತಿಯನ್ನು “ಬಿಹಾರದ ಅಭಿವೃದ್ಧಿಗೆ ಐತಿಹಾಸಿಕ ನಿರ್ಣಯ” ಎಂದು ಹೇಳಿದರು. ಇದು ತಮ್ಮ ದೀರ್ಘಕಾಲದ ಬೇಡಿಕೆಯಾಗಿತ್ತು ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಮೋದಿಯವರು ಈ ನಿಟ್ಟಿನಲ್ಲಿ ಬಿಹಾರಕ್ಕೆ ಸ್ಥಿರ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ ಅವರು, “ಜನತೆ ಎದ್ದು ನಿಂತು ಮೋದಿಗೆ ಧನ್ಯವಾದ ತಿಳಿಸಲಿ” ಎಂದು ಕೋರಿದರು.
ಆದರೆ, ಈ ಸಂದರ್ಭದಲ್ಲಿ ಅವರು “ಮೋದಿ” ಎಂಬ ಹೆಸರನ್ನು ಉಚ್ಚರಿಸುವ ಬದಲು “ಅಟಲ್” ಎಂದು ತಪ್ಪು ಹೆಸರನ್ನು ಹೇಳಿದ್ದು ವೀಡಿಯೊದಲ್ಲಿ ಕಾಣಸಿಗುತ್ತದೆ. ನಂತರ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಂಡು, “ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು” ಎಂದು ಹೇಳಿದರು.
ಈ ಘಟನೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ರಾಜಕೀಯ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ಜಾತಿ ಜನಗಣತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಡೆದ ಈ ಸಭೆಯಲ್ಲಿ ನಿತೀಶ್ ಕುಮಾರ್ ಬಿಜೆಪಿ-ಜೆಡಿಯು ಸರ್ಕಾರದ ನೀತಿಗಳನ್ನು ಬೆಂಬಲಿಸಿದ್ದಾರೆ.
ಇತ್ತ, ವಿರೋಧಿ ಪಕ್ಷಗಳು ನಿತೀಶ್ ಕುಮಾರ್ ಅವರ ಈ ತಪ್ಪನ್ನು ಗಮನಿಸಿ, ರಾಜಕೀಯವಾಗಿ ಟೀಕೆ ಮಾಡುತ್ತಿವೆ. ಆದರೆ, ಬಿಹಾರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬೆಂಬಲ ಮುಂದುವರಿಸಬೇಕು ಎಂಬುದು ಸಿಎಂ ಅವರ ನಿಲುವಾಗಿದೆ.