ಬೆಂಗಳೂರು : ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶನಿವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು 500 ಕ್ಕೂ ಅಧಿಕ ಹಿಂದು ಶ್ರದ್ಧಾಳುಗಳಿಗೆ ಸಾಮೂಹಿಕ ಕೃಷ್ಣ ಮಂತ್ರೋಪದೇಶ ನೀಡಿ ಅನುಗ್ರಹಿಸಿದರು.

ಜಾತಿ ಪಂಥ , ವಯಸ್ಸು ಲಿಂಗ ಬೇಧವಿದಲ್ಲದೇ 8 ರಿಂದ 80 ವರ್ಷದ ವರೆಗಿನ ಹಿಂದು ಪುರುಷ , ಮಹಿಳೆಯರಿಗೆ ಶ್ರೀಗಳು ತಪ್ತಮುದ್ರಾಧಾರಣೆಗೈದು , ಜಪಸರವನ್ನಿತ್ತು ಕೃಷ್ಣಮಂತ್ರೋಪದೇಶ ನೀಡಿ ಪ್ರಸಾದ ಸಹಿತ ಅನುಗ್ರಹಿಸಿದರು.

ಸಮಸ್ತ ಹಿಂದೂ ಸಮಾಜದ ಸಂಘಟನೆ ಬಲಪಡಿಸುವುದು. ಎಲ್ಲರೂ ಸದಾಚಾರ ನಿಷ್ಠರಾಗಿ ನೆಮ್ಮದಿಯ ಜೀವನ ನಡೆಸುವ ಹಾಗೆ ಆಗಬೇಕು. ನಮ್ಮ ಆಚಾರ ವಿಚಾರಗಳನ್ನು ಜಾತಿ ಪಂಥಗಳ ಬೇಧವಿಲ್ಲದೇ ಸಮಷ್ಟಿಯಾಗಿ ಪಾಲಿಸಿಕೊಂಡು ಬರುವಂತಾಗಬೇಕೆಂಬ ಸದುದ್ದೇಶದಿಂದ ಆಷಾಢ ಮಾಸದ ಪರ್ವಕಾಲದಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಶ್ರೀಗಳವರು ತಿಳಿಸಿದರು . ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತವಿರುವ ಶ್ರೀಮಠದ ಎಲ್ಲ ಶಾಖೆಗಳಲ್ಲೂ ಇಂಥ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಇದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ . ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ರಾದ ಡಾ ಸತ್ಯನಾರಾಯಣ ಆಚಾರ್ಯ , ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ ವೀರನಾರಾಯಣ ಪಾಂಡುರಂಗಿ , ಪ್ರಧಾನ ವ್ಯವಸ್ಥಾಪಕರಾದ ವಿದ್ವಾನ್ ಶಶಾಂಕ ಭಟ್ ಹಾಗೂ ಪ್ರಾಧ್ಯಾಪಕರು , ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
