
ಬೆಂಗಳೂರು : ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ಆತಂಕ ಮೂಡಿಸಿರುವ ಕ್ರೂರ ಘಟನೆ ನಡೆದಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಬಿಬಿಎಂಪಿಯ ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳಾ ಶವ ಪ್ರಕರಣಕ್ಕೆ ಇದೀಗ ನಿಗೂಢ ತಿರುವು ದೊರಕಿದೆ. ಮೃತ ಮಹಿಳೆ ಪುಷ್ಪಾ ಅಲಿಯಾಸ್ ಆಶಾ (ವಯಸ್ಸು ಸುಮಾರು 30), ಹುಳಿಮಾವು ನಿವಾಸಿಯಾಗಿದ್ದು, ಹಿಂದೂ ಧರ್ಮದವಳಾಗಿದ್ದ ಈಕೆ ಕೆಲ ವರ್ಷಗಳ ಹಿಂದೆ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿ ಸಹಜ ಜೀವನ ನಡೆಸುತ್ತಿದ್ದರು.
ಈ ದಂಪತಿ ಬೆಂಗಳೂರು ಹುಳಿಮಾವು ಪ್ರದೇಶದಲ್ಲಿ ವಾಸವಿದ್ದರೆಂಬ ಮಾಹಿತಿ ಲಭ್ಯವಾಗಿದೆ. ದಾಂಪತ್ಯ ಜೀವನದಲ್ಲಿ ಮಾತಿನ ಗಲಾಟೆ ನಡೆಯುತ್ತಿದ್ದುದು ತಿಳಿದುಬಂದಿದ್ದು, ಇದೀಗ ಪತಿತಾನೇ ಕೊಲೆ ಮಾಡಿ ಶವವನ್ನು ಕಸದ ಲಾರಿಗೆ ಬಿಸಾಕಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯ ಶವವು ನಿರ್ವಸ್ತ್ರ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅತ್ಯಾಚಾರ ಸಂಭವಿಸಿರಬಹುದೆಂಬ ಅನುಮಾನವೂ ತನಿಖಾಧಿಕಾರಿಗಳಿಗೆ ಉಂಟಾಗಿದೆ. ಶವವನ್ನು ಆಟೋದಲ್ಲಿ ತಂದು ಬಿಸಾಡಲಾಗಿದೆ ಎಂಬ ಶಂಕೆ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ದೃಢವಾಗುತ್ತಿದೆ.
ಈ ಬಗ್ಗೆ ಶನಿವಾರ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕುವ ಸಂದರ್ಭ ತಲೆಕೂದಲು ಕಾಣಿಸಿಕೊಂಡಿರುವುದನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ಒಂದು ಆಟೋದಲ್ಲಿ ಶವವನ್ನು ತಂದು ಬಿಸಾಕಿರುವ ದೃಶ್ಯ ಲಭಿಸಿದೆ.
ಶಂಕಿತ ಆರೋಪಿ ಪುಷ್ಪಾಳ ಪತಿಯಾಗಿರುವ ಸಾಧ್ಯತೆ ಬಗ್ಗೆ ತನಿಖೆ ನಡೆಯುತ್ತಿದ್ದು, ಕೊಲೆಗೆ ಕಾರಣವಾದ ಹಿನ್ನೆಲೆಯೊಂದಿಗಿನ ಸಂಬಂಧ ಪರಿಶೀಲನೆ ಮುಂದುವರೆದಿದೆ. ಈ ಕ್ರೂರ ಘಟನೆ ಬೆಂಗಳೂರು ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.