
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಪ್ರಗತಿಪುರದಲ್ಲಿ ನಡೆದ ಸ್ಟಾಫ್ ನರ್ಸ್ ಮಮತಾ ಅವರ ಹತ್ಯೆ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಮದುವೆಯಾಗುವಂತೆ ಒತ್ತಡ ಹೇರಿದ ಕಾರಣಕ್ಕಾಗಿ ಆಕೆಯ ಸಹೋದ್ಯೋಗಿ ಹಾಗೂ ಪ್ರಿಯಕರನೇ ಈ ಕೃತ್ಯ ಎಸಗಿರುವುದು ತನಿಖೆಯಿಂದ ದೃಢಪಟ್ಟಿದೆ.
ಘಟನೆಯ ಹಿನ್ನೆಲೆ:
ಮೂಲತಃ ಚಿತ್ರದುರ್ಗದ ಹಿರಿಯೂರಿನವರಾದ 39 ವರ್ಷದ ಮಮತಾ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಳೆದ 4 ವರ್ಷಗಳಿಂದ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಕುಮಾರಸ್ವಾಮಿ ಲೇಔಟ್ನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಇದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಹಾಸನ ಮೂಲದ 25 ವರ್ಷದ ಸುಧಾಕರ್ ಜೊತೆ ಮಮತಾ ಕಳೆದ 1 ವರ್ಷದಿಂದ ಪ್ರೀತಿಯಲ್ಲಿದ್ದರು.
ಕೊಲೆಗೆ ಕಾರಣವೇನು?
ಆರೋಪಿ ಸುಧಾಕರ್ ತನಗಿಂತ ವಯಸ್ಸಿನಲ್ಲಿ 14 ವರ್ಷ ಹಿರಿಯವಳಾದ ಮಮತಾಳನ್ನು ಮದುವೆಯಾಗಲು ನಿರಾಕರಿಸಿದ್ದನು. ಇತ್ತೀಚೆಗೆ ಸುಧಾಕರ್ ಕುಟುಂಬದವರು ಆತನಿಗೆ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ವಿಷಯ ತಿಳಿದ ಮಮತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. “ನನ್ನನ್ನೇ ಮದುವೆಯಾಗಬೇಕು, ಇಲ್ಲವಾದರೆ ನಿನ್ನ ಮತ್ತು ನಿನ್ನ ಕುಟುಂಬದ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಎಚ್ಚರಿಕೆ ನೀಡಿದ್ದರು. ಈ ಬೆದರಿಕೆಯಿಂದ ಆತಂಕಗೊಂಡ ಸುಧಾಕರ್, ಮಮತಾಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು.
ಕೃತ್ಯ ನಡೆದಿದ್ದು ಹೇಗೆ?
ಕಳೆದ ಡಿಸೆಂಬರ್ 24ರಂದು ಮಮತಾ ಅವರ ರೂಮ್ಮೇಟ್ ಊರಿಗೆ ತೆರಳಿದ್ದರು. ಅಂದು ರಾತ್ರಿ ಮನೆಗೆ ಬಂದ ಸುಧಾಕರ್, ಮದುವೆ ವಿಚಾರವಾಗಿ ಮತ್ತೆ ಜಗಳವಾಡಿದ್ದಾನೆ. ಗಲಾಟೆ ವಿಕೋಪಕ್ಕೆ ಹೋದಾಗ, ತನ್ನಲ್ಲಿದ್ದ ಸರ್ಜಿಕಲ್ ಬ್ಲೇಡ್ನಿಂದ ಮಮತಾಳ ಕತ್ತನ್ನು ಸೀಳಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು. ತನಿಖೆಯ ದಿಕ್ಕು ತಪ್ಪಿಸಲು ಆಕೆಯ ಮೊಬೈಲ್ ಫೋನ್ ಮತ್ತು ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದನು.
ಪೊಲೀಸರ ಸಮಯಪ್ರಜ್ಞೆ:
ಕೊಲೆ ಮಾಡಿದ ನಂತರ ಏನೂ ಅರಿಯದವನಂತೆ ಸುಧಾಕರ್ ಪೊಲೀಸರ ಜೊತೆಯೇ ಓಡಾಡಿಕೊಂಡಿದ್ದನು. ಆದರೆ, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ಮೊಬೈಲ್ ಕರೆಗಳ ವಿವರವನ್ನು (CDR) ಪರಿಶೀಲಿಸಿದಾಗ ಸುಧಾಕರ್ ಮೇಲೆ ಅನುಮಾನ ವ್ಯಕ್ತವಾಯಿತು. ಕಟ್ಟುನಿಟ್ಟಿನ ವಿಚಾರಣೆ ನಡೆಸಿದಾಗ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.




































