
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಹೆಡೆಮುರಿ ಕಟ್ಟಲು ಮುಂದಾಗಿರುವ ಖಾಕಿ ಪಡೆ, ಬೃಹತ್ ಕಾರ್ಯಾಚರಣೆಯ ಮೂಲಕ ಬರೋಬ್ಬರಿ 71 ಮಂದಿ ಶಂಕಿತ ಬಾಂಗ್ಲಾದೇಶಿಯರನ್ನು ವಶಕ್ಕೆ ಪಡೆದಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಆನೇಕಲ್ ಉಪವಿಭಾಗದ ಪೊಲೀಸರು ಜಂಟಿಯಾಗಿ ನಡೆಸಿದ ಈ ಸರಣಿ ದಾಳಿಯು ಕಳೆದೊಂದು ವಾರದಿಂದ ಬಿರುಸಿನಿಂದ ಸಾಗುತ್ತಿದೆ. ಹಿಂದೂ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಎಚ್ಚೆತ್ತ ಪೊಲೀಸರು, ನಗರದ ಹೊರವಲಯದ ವಿವಿಧೆಡೆ ಬಾಂಗ್ಲಾ ಮೂಲದ ವಲಸಿಗರು ಆಶ್ರಯ ಪಡೆದಿದ್ದ ಶೆಡ್ಗಳ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಈ ವೇಳೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಭಾರತದೊಳಗೆ ನುಸುಳಿ ಇಲ್ಲಿ ವಾಸವಿದ್ದವರನ್ನು ಗುರುತಿಸಿ ವಶಕ್ಕೆ ಪಡೆಯಲಾಗಿದೆ.
ನಕಲಿ ದಾಖಲೆಗಳ ಹಾವಳಿ: ಸೆರೆಸಿಕ್ಕ ಶಂಕಿತರ ಪತ್ತೆ ಕಾರ್ಯದ ವೇಳೆ ಪೊಲೀಸರಿಗೆ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಇವರೆಲ್ಲರೂ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದಲ್ಲದೆ, ಇಲ್ಲಿನ ಸ್ಥಳೀಯರಂತೆ ಬದುಕಲು ನಕಲಿ ಆಧಾರ್ ಕಾರ್ಡ್ಗಳು ಮತ್ತು ನಕಲಿ ಪಾಸ್ಪೋರ್ಟ್ಗಳನ್ನು ಸೃಷ್ಟಿಸಿಕೊಂಡಿದ್ದರು. ಕಳೆದ 2 ದಿನಗಳಲ್ಲಿ (ಸೋಮವಾರ ಮತ್ತು ಮಂಗಳವಾರ) ನಡೆದ ದಾಳಿಯಲ್ಲಿ ಹೆಬ್ಬಗೋಡಿ, ಬೇಗೂರು, ಆನೇಕಲ್, ಬನ್ನೇರುಘಟ್ಟ ಹಾಗೂ ಅತ್ತಿಬೆಲೆ ವ್ಯಾಪ್ತಿಯಲ್ಲಿ ಈ ಬಂಧನ ನಡೆದಿದೆ.
ವೃತ್ತಿಯ ಸೋಗಿನಲ್ಲಿ ಅಕ್ರಮ ವಾಸ: ಬಂಧಿತರಲ್ಲಿ ಹೆಚ್ಚಿನವರು ಗುಜರಿ ಗೋದಾಮುಗಳ ಶೆಡ್ಗಳಲ್ಲಿ ಗುಂಪು ಗುಂಪಾಗಿ ವಾಸಿಸುತ್ತಿದ್ದರು. ಕೆಲವರು ರಾತ್ರಿ ವೇಳೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು ಅಪಾರ್ಟ್ಮೆಂಟ್ಗಳಲ್ಲಿ ಸೆಕ್ಯೂರಿಟಿ ಹಾಗೂ ಮನೆಗೆಲಸದ ಸೋಗಿನಲ್ಲಿ ಅಡಗಿದ್ದರು. ಸದ್ಯ 71 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಗಾಗಿ ಮತ್ತು ದಾಖಲೆಗಳ ಕೂಲಂಕಷ ಪರಿಶೀಲನೆಗಾಗಿ ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ (FRRO) ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.




































