
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಚಿರತೆಗಳ ಹಾವಳಿ ಮಿತಿಮೀರಿದ್ದು, ಶುಕ್ರವಾರ ಬೆಳಿಗ್ಗೆ ಮನೆಯ ಅಂಗಳದಲ್ಲಿದ್ದ ಕೃಷಿಕರೊಬ್ಬರ ಮೇಲೆ ಚಿರತೆ ಭೀಕರ ದಾಳಿ ನಡೆಸಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ಯಾಡಿ 1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ (62) ಚಿರತೆ ದಾಳಿಗೊಳಗಾದ ದುರ್ದೈವಿ. ಜ. 16 ರಂದು ಬೆಳಿಗ್ಗೆ 8:15 ರ ಸುಮಾರಿಗೆ ಮಂಜಪ್ಪ ಅವರು ತಮ್ಮ ಮನೆಯ ಅಂಗಳದಲ್ಲಿದ್ದಾಗ ಪೊದೆಯಲ್ಲಿದ್ದ ಚಿರತೆ ಏಕಾಏಕಿ ಅವರ ಮೇಲೆ ಜಿಗಿದಿದೆ. ಪ್ರಾಣಾಪಾಯದಿಂದ ಪಾರಾಗಲು ಮಂಜಪ್ಪ ಅವರು ತಕ್ಷಣವೇ ಸಮೀಪದ ಅಡಿಕೆ ಮರವನ್ನು ಹತ್ತಿದ್ದಾರೆ. ಆದರೂ ಚಿರತೆಯು ಅವರ ಕಾಲನ್ನು ಬಿಡದೆ ಪರಚಿದ್ದರಿಂದ ಗಂಭೀರ ಗಾಯಗಳಾಗಿವೆ. ಪ್ರಸ್ತುತ ಅವರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಂಜಪ್ಪ ಅವರ ಪುತ್ರ ಪ್ರಭಾಕರ ನಾಯ್ಕ ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು. ಕೇವಲ ಕನ್ಯಾಡಿ ಮಾತ್ರವಲ್ಲದೆ, ಮುಂಡಾಜೆಯ ಸೀಟು ಮೂರು ಮಾರ್ಗದ ಬಳಿ ಶಾಲಾ ಬಾಲಕನೊಬ್ಬನಿಗೆ ಚಿರತೆ ಎದುರಾಗಿದೆ. ಇತ್ತ ಕಾನರ್ಪ ಪರಿಸರದಲ್ಲಿ ನಾಲ್ಕು ಮರಿಗಳೊಂದಿಗೆ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಅರಣ್ಯ ಇಲಾಖೆ ಕೂಡಲೇ ಚಿರತೆ ಹಿಡಿಯಲು ಬೋನು ಇರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.



































