
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಚೆಂಡಿನಾಕಾರದ ಸ್ಫೋಟಕವೊಂದು ಸ್ಫೋಟಗೊಂಡ ಪರಿಣಾಮ ಆಟವಾಡುತ್ತಿದ್ದ ಬಾಲಕನೊಬ್ಬ ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ಕಾಡುಪ್ರಾಣಿಗಳ ಬೇಟೆಗೆಂದು ಇರಿಸಲಾಗಿದ್ದ ಸ್ಫೋಟಕ ಇದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮನೆಯೊಂದರ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಂಗಳದಲ್ಲಿ ಬಿದ್ದಿದ್ದ ಚೆಂಡಿನಾಕಾರದ ವಸ್ತುವನ್ನು ಕಂಡು ಅದು ಆಟದ ಬಾಲ್ ಎಂದು ಭಾವಿಸಿದ ಮಕ್ಕಳು ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಒಬ್ಬ ಬಾಲಕ ಆ ವಸ್ತುವನ್ನು ಬೌಲಿಂಗ್ ಮಾಡಿದರೆ, ಅಭೀಶ್ ಎಂಬ ಬಾಲಕ ಬ್ಯಾಟ್ನಿಂದ ಅದನ್ನು ಹೊಡೆದಿದ್ದಾನೆ. ಬ್ಯಾಟ್ ತಗುಲಿದ ತಕ್ಷಣವೇ ಆ ವಸ್ತು ಭೀಕರವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಾಲಕ ಅಭೀಶ್ಗೆ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕಾಡುಹಂದಿಗಳನ್ನು ಬೇಟೆಯಾಡಲು ದುಷ್ಕರ್ಮಿಗಳು ಇರಿಸಿದ್ದ ‘ಪಟಾಕಿ ಸ್ಫೋಟಕ’ ಅಥವಾ ‘ಬಾಂಬ್’ ಇದಾಗಿರುವ ಸಾಧ್ಯತೆಯಿದೆ. ಈ ಘಟನೆಯು ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಭೀತಿ ಹುಟ್ಟಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸ್ಫೋಟಕಗಳ ಕಾಯ್ದೆ ಸೆಕ್ಷನ್ 9(B), 1(b) ಮತ್ತು ಬಿಎನ್ಎಸ್ ಸೆಕ್ಷನ್ 125(A) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಅಕ್ರಮವಾಗಿ ಸ್ಫೋಟಕ ಇರಿಸಿದವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



































