
ಕಾರ್ಕಳ: ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಅನುಭವೀ ಪೊಲೀಸ್ ಅಧಿಕಾರಿ ಬೆಳ್ಳಿಯಪ್ಪ ಕೆ. ಯು. ಅವರನ್ನು ಕಾರ್ಕಳ ಪೊಲೀಸ್ ಉಪ ವಿಭಾಗದ ನೂತನ ಡಿವೈಎಸ್ಪಿ (DySP) ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನೇಮಕಾತಿಯ ಹಿನ್ನೆಲೆ:
ಕಾರ್ಕಳದ ಎಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಹರ್ಷಪ್ರಿಯಂವದ (ಐಪಿಎಸ್) ಅವರಿಗೆ ಬೆಂಗಳೂರಿನ ಸಿಐಡಿ ವಿಭಾಗದ ಎಸ್ಪಿಯಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ತೆರವಾದ ಈ ಸ್ಥಾನಕ್ಕೆ ಈಗ ಬೆಳ್ಳಿಯಪ್ಪ ಅವರನ್ನು ನಿಯೋಜಿಸಲಾಗಿದೆ. ಪ್ರಸ್ತುತ ಇವರು ಮಂಗಳೂರಿನ ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಕ್ಷ ಅಧಿಕಾರಿ ಬೆಳ್ಳಿಯಪ್ಪ:
ಬೆಳ್ಳಿಯಪ್ಪ ಅವರು ಉಡುಪಿ ಜಿಲ್ಲೆಯ ಪೊಲೀಸ್ ವಲಯದಲ್ಲಿ ಚಿರಪರಿಚಿತ ಹೆಸರು. ಈ ಹಿಂದೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಹಾಗೂ ಕುಂದಾಪುರ ಉಪ ವಿಭಾಗದಲ್ಲಿ ಡಿವೈಎಸ್ಪಿ ಆಗಿ ದಕ್ಷ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಹಲವು ಕ್ಲಿಷ್ಟಕರ ಹಾಗೂ ಸವಾಲಿನ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಇವರ ಅಪಾರ ಅನುಭವ ಕಾರ್ಕಳ ಉಪ ವಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನೆರವಾಗಲಿದೆ ಎಂಬ ನಿರೀಕ್ಷೆಯಿದೆ.




































