
ಸಭಾಪತಿ ಹಾಗೂ ಸಭಾಧ್ಯಕ್ಷರ ಕಚೇರಿಯಲ್ಲಿ ಸಾಧಕಿಗೆ ಸನ್ಮಾನ
ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಶೂನ್ಯ ವೇಳೆಯಲ್ಲಿ ಭಾರತ U15 ಬಾಲಕಿಯರ ವಾಲಿಬಾಲ್ ತಂಡದ ನಾಯಕಿ ಶಗುನ್ ಎಸ್ ವರ್ಮ ಹೆಗ್ಡೆ ಇವರ ಸಾಧನೆಯನ್ನು ಗುಣಗಾನ ಮಾಡಿದ ಸಭಾಧ್ಯಕ್ಷ ಯು. ಟಿ ಖಾದರ್ ರವರು ಬಾಲಕಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ಸಾರ್ವಜನಿಕರಿಂದ ಕಿಕ್ಕಿರಿದು ತುಂಬಿದ್ದ ಕಲಾಪ ವೀಕ್ಷಣಾ ಗ್ಯಾಲರಿಯ ಮುಂಭಾಗದಲ್ಲಿ ಕುಳಿತಿದ್ದ ಶಗುನ್ ಎದ್ದು ನಿಂತು ಸಭಾಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸುತ್ತಿದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಸಚಿವರು ಹಾಗೂ ಶಾಸಕರು ಮೇಜು ತಟ್ಟಿ ಬಾಲಕಿಯ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಲಾಪದ ನಂತರ ಸಭಾಧ್ಯಕ್ಷರಾದ ಶ್ರೀ ಯು.ಟಿ ಖಾದರ್ ರವರ ಕಚೇರಿ ಹಾಗೂ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ್ ಹೊರಟ್ಟಿಯವರ ಕಚೇರಿಯಲ್ಲಿ ಶಗುನ್ ವರ್ಮ ಅವರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿ ಶುಭಾಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಸಚಿವರಾದ ಬೋಸರಾಜ್ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಕುಣಿಗಲ್ ಶಾಸಕ ರಂಗನಾಥ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶುಭದರಾವ್, ಸಾಮಾಜಿಕ ಧುರೀಣ ಸುಗ್ಗಿ ಸುಧಾಕರ್ ಶೆಟ್ಟಿ, ಸಂದೇಶ್ ವರ್ಮ ತರಬೇತುದಾರ ಜೀವನ್ ಡಿಸಿಲ್ವಾ, ರಾಮ್ ಪ್ರಸಾದ್ ಮಾದಲಾದವರು ಉಪಸ್ಥಿತರಿದ್ದರು.



































