
ಬೆಂಗಳೂರು: ರಾಜಧಾನಿಯ ರಾಮಮೂರ್ತಿನಗರದಲ್ಲಿ ಇತ್ತೀಚೆಗೆ ನಡೆದಿದ್ದ ಮಂಗಳೂರು ಮೂಲದ ಸಾಫ್ಟ್ವೇರ್ ಎಂಜಿನಿಯರ್ ಶರ್ಮಿಳಾ ಅವರ ನಿಗೂಢ ಸಾವು ಇದೀಗ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಆಕಸ್ಮಿಕ ಅಗ್ನಿ ಅವಘಡ ಎಂದು ಭಾವಿಸಲಾಗಿದ್ದ ಈ ಘಟನೆ, ವಾಸ್ತವದಲ್ಲಿ ಕಾಮೋನ್ಮಾದದಿಂದ ನಡೆದ ಭೀಕರ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದೆ. ಈ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ನೆರೆಮನೆಯಲ್ಲಿದ್ದ 18 ವರ್ಷದ ಪಿಯುಸಿ ವಿದ್ಯಾರ್ಥಿ ಕರ್ನಾಲ್ ಕುರೈ ಎಂಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಮೂಲತಃ ಮಂಗಳೂರಿನ ಕಾವೂರು ನಿವಾಸಿಯಾದ 34 ವರ್ಷದ ಶರ್ಮಿಳಾ, ಬೆಂಗಳೂರಿನ ಸುಬ್ರಹ್ಮಣ್ಯ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಕಳೆದ ಜನವರಿ 3ರಂದು ಶರ್ಮಿಳಾ ಅವರ ರೂಮ್ಮೇಟ್ ಊರಿಗೆ ಹೋಗಿದ್ದ ಕಾರಣ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಇದನ್ನೇ ಸಂಚಿನ ಭಾಗವಾಗಿಸಿಕೊಂಡ ಆರೋಪಿ ಕರ್ನಾಲ್, ಕಿಟಕಿಯ ಮೂಲಕ ಅಕ್ರಮವಾಗಿ ಮನೆಯೊಳಗೆ ನುಗ್ಗಿದ್ದಾನೆ. ಒಂಟಿಯಾಗಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದಾಗ, ಶರ್ಮಿಳಾ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿ ಆತನನ್ನು ಮನೆಯಿಂದ ಹೊರಹೋಗುವಂತೆ ಗದರಿಸಿದ್ದಾರೆ.
ತನ್ನ ವಿಕೃತ ಬಯಕೆಗೆ ತಡೆಯೊಡ್ಡಿದ ಶರ್ಮಿಳಾ ವಿರುದ್ಧ ರೊಚ್ಚಿಗೆದ್ದ ಆರೋಪಿ, ಅವರ ಮೇಲೆ ಪಾಶವೀಯವಾಗಿ ಹಲ್ಲೆ ನಡೆಸಿದ್ದಾನೆ. ಕೈ ಮತ್ತು ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗೊಳಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಪೊಲೀಸರ ಕಣ್ಣಿಗೆ ಮಣ್ಣೆರಚಲು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲು ಕೊಠಡಿಯಲ್ಲಿದ್ದ ಬಟ್ಟೆಗಳಿಗೆ ಬೆಂಕಿ ಹಚ್ಚಿ, ಶಾರ್ಟ್ ಸರ್ಕ್ಯೂಟ್ನಿಂದ ಸಾವು ಸಂಭವಿಸಿದೆ ಎಂದು ಬಿಂಬಿಸಲು ಪ್ರಯತ್ನಿಸಿ ಪರಾರಿಯಾಗಿದ್ದ. ಆರಂಭದಲ್ಲಿ ಬೆಂಕಿಯ ಹೊಗೆಯಿಂದ ಸಾವು ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದರೂ, ಮರಣೋತ್ತರ ಪರೀಕ್ಷೆಯ ವರದಿಯು ಕೊಲೆಯ ಸತ್ಯಾಂಶವನ್ನು ಹೊರಹಾಕಿತು. ರಾಮಮೂರ್ತಿನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಾಮುಕ ವಿದ್ಯಾರ್ಥಿಯನ್ನು ಜೈಲಿಗಟ್ಟಿದ್ದಾರೆ.



































