
ಬೈಲೂರು: ಶಿವಾಯಃ ಗೆಳೆಯರ ಬಳಗ, ಬೈಲೂರು ಇವರ ವತಿಯಿಂದ ಬೈಲೂರಿನ ಬೈಲುಗದ್ದೆ ಬಳಿ ಆಗಸ್ಟ್ 17, 2025 ರಂದು ಭಾನುವಾರ 4ನೇ ವರ್ಷದ “ಕೇಸರ್ದ ಗೊಬ್ಬು” ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಈ ವಾರ್ಷಿಕ ಕ್ರೀಡಾಕೂಟದಲ್ಲಿ ಗ್ರಾಮದ ಎಲ್ಲ ವಯೋಮಾನದವರೂ ಭಾಗವಹಿಸಿ ಕೆಸರು ಗದ್ದೆ ಆಟಗಳ ಮೋಜು ಅನುಭವಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ 8:30 ಕ್ಕೆ ಸರಿಯಾಗಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ದಿನವಿಡೀ ವಿವಿಧ ಸ್ಪರ್ಧೆಗಳು ಜರುಗಲಿವೆ. ಪುರುಷರಿಗಾಗಿ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದೇ ರೀತಿ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ ಮತ್ತು ಮಡಿಕೆ ಒಡೆಯುವಂತಹ ಮನರಂಜನಾತ್ಮಕ ಆಟಗಳಿರುತ್ತವೆ.
ಮಕ್ಕಳಿಗಾಗಿ ವಿಶೇಷವಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, 50 ಮೀಟರ್ ಓಟ, ಚಮಚದಲ್ಲಿ ಲಿಂಬೆಹಣ್ಣು ಇಟ್ಟುಕೊಂಡು ಓಟ, ಮಡಿಕೆ ಒಡೆಯುವ ಸ್ಪರ್ಧೆ ಹಾಗೂ ಇತರೆ ಆಟಗಳಲ್ಲಿ ಪಾಲ್ಗೊಳ್ಳಬಹುದು. ಈ ಸ್ಪರ್ಧೆಗಳಲ್ಲಿ ಬೈಲೂರು ಗ್ರಾಮದ ಎಲ್ಲ ಮಕ್ಕಳು, ಮಹಿಳೆಯರು ಮತ್ತು ಪುರುಷರು ಭಾಗವಹಿಸಲು ಮುಕ್ತ ಅವಕಾಶವಿದೆ.
ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆ ದಿ. ವಿನೋದ್ ಶೆಟ್ಟಿ ಸ್ಮರಣಾರ್ಥ ನಡೆಯುವ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ. ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿರುವ ಈ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 9,999 ರೂಪಾಯಿ ನಗದು ಮತ್ತು ಫಲಕ, ಹಾಗೂ ದ್ವಿತೀಯ ಬಹುಮಾನವಾಗಿ 5,555 ರೂಪಾಯಿ ನಗದು ಮತ್ತು ಫಲಕ ನೀಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರುತ್ತಿರುವ ಶಿವಾಯಃ ಗೆಳೆಯರ ಬಳಗ, ಬೈಲೂರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದೆ. ಸ್ಪರ್ಧೆಗಳ ಕುರಿತು ಸಂಘಟಕರ ಮತ್ತು ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
