
ಲಕ್ನೋ: ಅಯೋಧ್ಯೆಯ ಪವಿತ್ರ ರಾಮಮಂದಿರ ಮತ್ತೊಂದು ಐತಿಹಾಸಿಕ ಘಟ್ಟಕ್ಕೆ ಹೆಜ್ಜೆಯಿಡುತ್ತಿದೆ. ಜೂನ್ 3ರಂದು ಮಂದಿರದ ಗರ್ಭಗುಡಿಯ ಮೇಲಿರುವ ಸ್ವರ್ಣದ ಶಿಖರ (ಬಂಗಾರದ ಗುಮ್ಮಟ)ವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗುತ್ತಿದೆ. ಇದು ಭಕ್ತಿಗೆ, ಪವಿತ್ರತೆಯ ಸಂಕೇತವಾಗಿ ಗುರುತಿಸಲ್ಪಡುತ್ತದೆ.
ಭವ್ಯವಾಗಿ ನಿರ್ಮಿತಗೊಂಡಿರುವ ಈ ಬಂಗಾರದ ಶಿಖರವು ಕಿಮೀಗಳ ದೂರದಿಂದಲೂ ಕಾಣಿಸಬಹುದಾದಷ್ಟು ಭವ್ಯವಾಗಿದೆ. ಭಕ್ತರ ಕಣ್ಮನ ಸೆಳೆಯುವ ಈ ಗುಮ್ಮಟವು ಮಂದಿರದ ಆಧ್ಯಾತ್ಮಿಕತೆಯನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಿದೆ.
ಜೂನ್ 4ರಿಂದ ಮೂರು ದಿನಗಳ ಕಾಲ 2ನೇ ಬಾರಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಈ ಬಾರಿ ಮೊದಲ ಮಹಡಿಯಲ್ಲಿ ಇತರೆ ದೇವತೆಗಳ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ‘ರಾಮ ದರ್ಬಾರ್’ ಕಾರ್ಯಕ್ರಮ ನಡೆಯಲಿದೆ. ಇದರ ಪ್ರಯುಕ್ತ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಅಯೋಧ್ಯೆಗೆ ಹರಿದು ಬರುತ್ತಿದ್ದಾರೆ.
ಇದರ ನಡುವೆ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಭಾರತಕ್ಕೆ ಆಗಮಿಸಿದ್ದು, ಅವರು ಕೂಡ ರಾಮಮಂದಿರಕ್ಕೆ ಭೇಟಿಕೊಡಲಿರುವುದು ಗಮನಾರ್ಹ ಸಂಗತಿಯಾಗಿದ್ದು, ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.