
ಮುಂಬೈ : ಏಷ್ಯಾ ಕಪ್ 2025ರ ಭಾರತ ತಂಡದ ಆಯ್ಕೆ ಕುತೂಹಲ ಮೂಡಿಸಿದ್ದು, ಆಗಸ್ಟ್ 19ರಂದು ನಡೆಯಲಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಕೆಲವೊಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಮೂವರು ದೊಡ್ಡ ಆಟಗಾರರನ್ನು ತಂಡದಿಂದ ಹೊರಗಿಡಬಹುದು ಎನ್ನಲಾಗಿದೆ.
ಶುಭಮನ್ ಗಿಲ್ಗೆ ಸ್ಥಾನವಿಲ್ಲ?
ಕ್ರಿಕ್ಬಜ್ ವರದಿಯ ಪ್ರಕಾರ, ಟೆಸ್ಟ್ ನಾಯಕ ಶುಭಮನ್ ಗಿಲ್ ಅವರು ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎನ್ನಲಾಗಿದೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಈಗಾಗಲೇ ಆರಂಭಿಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಒಂದು ವೇಳೆ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಗಿಲ್ ಆಯ್ಕೆಯನ್ನು ಬಲವಾಗಿ ಬೆಂಬಲಿಸಿದರೆ, ಮೀಸಲು ಆರಂಭಿಕರಾಗಿರುವ ಯಶಸ್ವಿ ಜೈಸ್ವಾಲ್ಗೆ ಅವಕಾಶ ಕಷ್ಟವಾಗಬಹುದು.
ಸಿರಾಜ್ ಮತ್ತು ಶಮಿಗೆ ನಿರಾಸೆ
ವೇಗಿ ಮೊಹಮ್ಮದ್ ಸಿರಾಜ್ ಅವರು ಇಂಗ್ಲೆಂಡ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದಿದ್ದರೂ ಏಷ್ಯಾ ಕಪ್ಗೆ ಆಯ್ಕೆಯಾಗುವುದು ಅನುಮಾನ. ಜಸ್ಪ್ರೀತ್ ಬುಮ್ರಾ ಅವರು ತಂಡಕ್ಕೆ ಮರಳುತ್ತಿರುವ ಕಾರಣ ಸಿರಾಜ್ಗೆ ಸ್ಥಾನ ಸಿಗದೇ ಇರಬಹುದು. ಆಯ್ಕೆ ಸಮಿತಿಯು ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ಅವರನ್ನು ವೇಗಿಗಳಾಗಿ ಪರಿಗಣಿಸಿದೆ ಎಂದು ವರದಿಯಾಗಿದೆ. ಮೊಹಮ್ಮದ್ ಶಮಿ ಅವರನ್ನೂ ಸಹ ಆಯ್ಕೆ ಮಾಡಲಾಗುವುದಿಲ್ಲ ಎನ್ನಲಾಗಿದೆ.
ಶ್ರೇಯಸ್ ಅಯ್ಯರ್ಗೆ ಇಲ್ಲ ಸ್ಥಾನ
ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರೂ ಶ್ರೇಯಸ್ ಅಯ್ಯರ್ ಅವರಿಗೂ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಸಿಗದು ಎನ್ನಲಾಗಿದೆ. ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಮಧ್ಯಮ ಕ್ರಮಾಂಕದಲ್ಲಿ ಖಚಿತ ಆಯ್ಕೆಗಳಾಗಿದ್ದಾರೆ. ಆಲ್ರೌಂಡರ್ ಸ್ಥಾನಕ್ಕಾಗಿ ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಅವರು ಹಾರ್ದಿಕ್ ಪಾಂಡ್ಯ ಜೊತೆ ಪೈಪೋಟಿ ನಡೆಸುತ್ತಿದ್ದಾರೆ.



































