
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹರಾಜರಕಟ್ಟೆ ಗ್ರಾಮದಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಸಹಾಯಕಿ ಚಂದ್ರಮ್ಮ ಎಂಬವರು ಮಗು ದೀಕ್ಷಿತ್ ಮೇಲೆ ಹೀನ ಕೃತ್ಯ ಎಸಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪೋಷಕರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಗುವಿಗೆ ಹಿಂಸಾತ್ಮಕ ವರ್ತನೆ!
ಮಹರಾಜರಕಟ್ಟೆ ಗ್ರಾಮದ ರಮೇಶ್ ಮತ್ತು ಚೈತ್ರಾ ಅವರ ಮಗು ಅಂಗನವಾಡಿಯಲ್ಲಿ ಹಠ ಮಾಡುತ್ತಿತ್ತೆಂದು ಅಂಗನವಾಡಿ ಸಹಾಯಕಿ ಬರೆ ಎಳೆದಿದ್ದು, ಬಳಿಕ ಮಗು ಧರಿಸಿದ ಡೈಪರ್ ಒಳಗೆ ಖಾರದ ಪುಡಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಮಗುವನ್ನು ಕರೆತರಲು ಹೋದ ಪೋಷಕರು ಇದನ್ನು ಗಮನಿಸಿ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಭಾರೀ ವಿರೋಧಕ್ಕೆ ಕಾರಣವಾಗಿದ್ದು, ಸಂಬಂಧಿತ ಅಧಿಕಾರಿಗಳು ಚಂದ್ರಮ್ಮನನ್ನು ಅಮಾನತು ಮಾಡಿದ್ದಾರೆ. ಮಕ್ಕಳ ಮೇಲೆ ಹಿಂಸೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.