
ಉಡುಪಿ: ಅಂಬಲಪಾಡಿಯ ಬಿಲ್ಲವ ಸೇವಾ ಸಂಘ (ರಿ.) ಇದರ ಆಶ್ರಯದಲ್ಲಿರುವ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ಅನ್ನಸಂತರ್ಪಣೆ ಹಾಗೂ 66ನೇ ಭಜನಾ ಮಂಗಲೋತ್ಸವವು ಜನೆವರಿ 25ರಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು.
ಧಾರ್ಮಿಕ ಕಾರ್ಯಕ್ರಮಗಳು:
ದಿನದ ಧಾರ್ಮಿಕ ವಿಧಿವಿಧಾನಗಳು ದಯಾಕರ ಶಾಂತಿ ಬನ್ನಂಜೆ ಅವರ ಪೌರೋಹಿತ್ಯದಲ್ಲಿ ನೆರವೇರಿದವು. ಸಂಘದ ಅಧ್ಯಕ್ಷರಾದ ಶಿವದಾಸ್ ಪಿ. ಅವರು ದೀಪ ಪ್ರಜ್ವಲಿಸುವ ಮೂಲಕ ಭಜನಾ ಮಂಗಲೋತ್ಸವಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ 12 ಗಂಟೆಯಿಂದ ಮಧ್ಯರಾತ್ರಿಯವರೆಗೆ ತಾಲ್ಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಸತತವಾಗಿ ಭಜನಾ ಸೇವೆ ನಡೆಯಿತು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಉಪಾಧ್ಯಕ್ಷ ಎ. ಮುದ್ದಣ್ಣ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಹಾಗೂ ಪದಾಧಿಕಾರಿಗಳಾದ ದಯಾನಂದ ಎ., ಮಹೇಂದ್ರ ಕೋಟ್ಯಾನ್, ವಿನಯ್ ಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಘಟಕದ ಗೌರವ ಸಂಚಾಲಕಿ ವಿಜಯಾ ಜಿ. ಬಂಗೇರ, ಸಂಚಾಲಕಿ ಗೋಧಾವರಿ ಎಮ್. ಸುವರ್ಣ ಮತ್ತು ಕಾರ್ಯದರ್ಶಿ ವಾಣಿಶ್ರೀ ಅರುಣ್ ನೇತೃತ್ವದಲ್ಲಿ ಮಹಿಳಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅರ್ಚಕ ವೃಂದ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.



































