
ಬಾರಾಮತಿ : ವಿಮಾನ ದುರಂತದಲ್ಲಿ ಅಕಾಲಿಕ ಮರಣಕ್ಕೀಡಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ 11 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ. ತಮ್ಮ ರಾಜಕೀಯ ಸಹೋದ್ಯೋಗಿ ಹಾಗೂ ಆಪ್ತ ಸ್ನೇಹಿತನ ನಿಧನಕ್ಕೆ ಫಡ್ನವೀಸ್ ತೀವ್ರ ಸಂತಾಪ ಸೂಚಿಸಿದ್ದು, ಈ ಘಟನೆಯನ್ನು “ಹೃದಯ ವಿದ್ರಾವಕ” ಎಂದು ಬಣ್ಣಿಸಿದ್ದಾರೆ.
ಅಜಿತ್ ದಾದಾ ಅವರ ನಿಧನದ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿರುವ ಫಡ್ನವೀಸ್, “ಈ ಕ್ಷಣದಲ್ಲಿ ನನಗೆ ಮಾತುಗಳೇ ಹೊರಡುತ್ತಿಲ್ಲ, ನಾನು ನಿಶ್ಚೇಷ್ಟಿತನಾಗಿದ್ದೇನೆ” ಎಂದು ಭಾವುಕರಾಗಿ ನುಡಿದರು. ಅಜಿತ್ ಪವಾರ್ ಅವರು ಕೇವಲ ಒಬ್ಬ ಜನನಾಯಕನಷ್ಟೇ ಅಲ್ಲ, ಜನರೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದ ವಿಶಾಲ ಹೃದಯದ ಧೈರ್ಯಶಾಲಿ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಅವರು ಕಂಬನಿ ಮಿಡಿದರು. ಅಜಿತ್ ಪವಾರ್ ಅವರ ರಾಜಕೀಯ ಕರ್ಮಭೂಮಿ ಬಾರಾಮತಿಯಲ್ಲೇ ನಾಳೆ ಸಕಲ ಸಕಲ ಮರ್ಯಾದೆಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.



































