ಅಹಮದಾಬಾದ್: ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ನಲ್ಲಿ ಗುರುವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 265 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಲಂಡನ್ಗೆ ತೆರಳುತ್ತಿದ್ದ ಬೋಯಿಂಗ್ 787-8 ಗ್ರೀಮ್ ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್ನ ಮೆಡಿಕಲ್ ಕಾಲೇಜು ಕಾಂಪೌಂಡ್ಗೆ ಬಡಿದಿದೆ.
ಈ ಭೀಕರ ದುರಂತದಲ್ಲಿ ಭಾರತೀಯರೊಂದಿಗೆ ಬ್ರಿಟನ್, ಕೆನಡಾ ಮತ್ತು ಪೋರ್ಚುಗೀಸ್ ಪ್ರಜೆಗಳೂ ಸಾವನ್ನಪ್ಪಿದ್ದಾರೆ. ಓರ್ವ ಪ್ರಯಾಣಿಕ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಮೃತರ ಪೈಕಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರೂ ಇದ್ದಾರೆ ಎಂಬ ಮಾಹಿತಿ ದೃಢವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜೂನ್ 13ರಂದು ಬೆಳಿಗ್ಗೆ 9 ಗಂಟೆಗೆ ಅಹಮದಾಬಾದ್ ತಲುಪಿದ್ದು, ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಅವರು ಗಾಯಾಳುಗಳನ್ನು ನೋಡಲು ಸಿವಿಲ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸಚಿವ ರಾಮ್ ಎಂ ನಾಯ್ಡು ಹಾಗೂ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮೋದಿ ಅವರನ್ನು ಸ್ವಾಗತಿಸಿದರು.
ಘಟನೆ ನಡೆದ ತಕ್ಷಣವೇ ಪ್ರಧಾನಿ ಮೋದಿ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಗ್ರ ಮಾಹಿತಿ ಪಡೆದು, ತಕ್ಷಣದ ನೆರವು ಒದಗಿಸಲು ಸೂಚನೆ ನೀಡಿದ್ದರು. ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕೂಡ ಕಿಂಜರಪ್ಪು ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಹಿತಿ ನೀಡಲಾಯಿತು.
ಅಮಿತ್ ಶಾ ಹಾಗೂ ನಾಯ್ಡು ಅಹಮದಾಬಾದ್ಗೆ ತುರ್ತಾಗಿ ತೆರಳಿದ್ದು, ಆಸ್ಪತ್ರೆಯಲ್ಲಿ ಗಾಯಾಳುಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ರಕ್ಷಣಾ ಕಾರ್ಯಾಚರಣೆ ಜೋರಾಗಿ ಸಾಗುತ್ತಿದೆ.